ಮಂಗಳೂರು : ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತವು ಎ.14ರವರೆಗೆ ವಿಧಿಸಿರುವ ಸೆ.144(3)ಕ್ಕೆ ಪೂರಕವಾಗಿ ಹೆಚ್ಚುವರಿ ಕೆಲವು ನಿರ್ಬಂಧವನ್ನು ವಿಧಿಸಿ ಗುರುವಾರ ಹೊರಡಿಸಿದ ಆದೇಶದಂತೆ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಶನಿವಾರವೂ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಪಪಡಿಸಿದ್ದಾರೆ.
ಶುಕ್ರವಾರ ಮಂಗಳೂರಿನಲ್ಲಿ ವೀಡಿಯೋ ಸಂದೇಶ ನೀಡಿದ ಅವರು ಶುಕ್ರವಾರದಿಂದ ಖಾಸಗಿ ವಾಹನಗಳ ಸಂಚಾರವನ್ನು ಜಿಲ್ಲಾದ್ಯಂತ ಸಂಪೂರ್ಣ ನಿಷೇಧಿಸಲಾಗಿದೆ. ಅನುಮತಿ ಇಲ್ಲದಿರುವ ಎಲ್ಲಾ ವಾಹನಗಳ ತಿರುಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ದಿನಸಿ ಖರೀದಿಗಾಗಿ ಮೀಸಲಿಟ್ಟಿರುವ ಬೆಳಗ್ಗೆ 7ರಿಂದ 12ರವರೆಗಿನ ಸಮಯದಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ತಮ್ಮ ಮನೆ ಸಮೀಪದ ಅಂಗಡಿಗಳಿಂದ ದಿನಸಿ ಖರೀದಿ ಮಾಡಬಹುದು ಎಂದರು.