ಬಂಟ್ವಾಳ : ಕೋರೋನಾ ವೈರಸ್ ಸೋಂಕು ತಡೆಯುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಎರಡು ದಿನದ ಸಂಪೂರ್ಣ ಬಂದ್ ಯಶಸ್ವಿಯಾಗಿದ್ದು, ಸೋಮವಾರವೂ ಮುಂದುವರಿಯಲಿದೆ ಎಂದು ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ಧಾರೆ.
ಮಂಗಳೂರಿನ ಜಿಲ್ಲಾಡಳಿತದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಎರಡು ದಿನದ ಕಡ್ಡಾಯ ಬಂದ್ ಗೆ ಬೆಂಬಲ ನೀಡಿದ್ದೀರಿ. ಕೋವಿಡ್-19 ನಿಯಂತ್ರಣಕ್ಕಾಗಿ ನಾವು ಕಟು ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.
ಸೋಮವಾರವೂ ದಕ್ಷಿಣ ಕನ್ನಡದಲ್ಲಿ ಸಂಪೂರ್ಣ ಬಂದ್ ಮುಂದುವರಿಯಲಿದ್ದು, ಮಂಗಳವಾರ ಒಂದು ದಿನ ಅಂಗಡಿಗಳು ತೆರೆದಿರಲಿದೆ. ಮಂಗಳವಾರ ಬೆಳಗ್ಗೆ 6 ರಿಂದ 3 ಗಂಟೆ ತನಕ ದಿನಸಿ ಅಂಗಡಿಗಳು ತೆರೆದಿರುತ್ತದೆ ಎಂದು ಸಚಿವರು ಹೇಳಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ದಿನಸಿ ಸಾಮಾನುಗಳನ್ನು ಖರೀದಿಸಿ ಎಂದು ಜನರಲ್ಲಿ ಮನವಿ ಮಾಡಿಕೊಂಡ ಸಚಿವರು, ಕುಟುಂಬದ ಒಬ್ಬ ವ್ಯಕ್ತಿ ಮಾತ್ರ ಅಂಗಡಿಗೆ ಬರಬೇಕು,
ವ್ಯಾಪಾರಿಗಳು ನಿಗದಿತ ದರದಲ್ಲೇ ಆಹಾರ ಸಾಮಾಗ್ರಿಗಳನ್ನು ಕೊಡಬೇಕು. ವ್ಯಾಪಾರಿಗಳು ದರ ಹೆಚ್ಚು ಮಾಡಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.