ಮಂಗಳೂರು: ಕೊರೊನಾ ವೈರಸ್ ತಡೆ ಮುನ್ನೆಚ್ಚರಿಕೆ ಕ್ರಮವಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಆನ್ ಲೈನ್ ಪಡಿತರ ವಿತರಣೆಯನ್ನು ಬಯೋಮೆಟ್ರಿಕ್ ಬದಲು ಆಧಾರ್ ಆಧಾರಿತ ಮೊಬೈಲ್ ಒಟಿಪಿ ಮೂಲಕ ವಿತರಿಸುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಎಲ್ಲಾ ಪಡಿತರ ಅಂಗಡಿಗಳಿಗೆ ಸೂಚಿಸಿದೆ. ಬುಧವಾರದಿಂದಲೇ ಈ ವ್ಯವಸ್ಥೆ ಜಾರಿಗೆ ಬಂದಿದ್ದು, ಮುಂದಿನ ಆದೇಶದ ವರೆಗೆ ಜಾರಿಯಲ್ಲಿರುತ್ತದೆ. ಪಡಿತರ ಪಡೆಯಲು ಬರುವವರು ಆಹಾರ ಇಲಾಖೆಯಲ್ಲಿ ನೋಂದಣಿಯಾಗಿರುವ ತಮ್ಮ ದೂರವಾಣಿ ಸಂಖ್ಯೆ ಇರುವ ಮೊಬೈಲ್ ಫೋನನ್ನು ತೆಗೆದುಕೊಂಡು ಬರಬೇಕು. ಆಧಾರ್ ನಲ್ಲಿ ಮೊಬೈಲ್ ನೋಂದಣಿ ಆಗಿಲ್ಲದಿದ್ದರೆ ಮಾತ್ರ ಬಯೋಮೆಟ್ರಿಕ್ ಬಳಸಬಹುದು ಎಂದು ಪ್ರಕಟಣೆ ತಿಳಿಸಿದೆ.