ಬಂಟ್ವಾಳ: ರೂ. 17.22 ಲಕ್ಷ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾದ ಗ್ರಾಮೀಣ ಭಾಗದಲ್ಲಿ ಸಂತೆಕಟ್ಟೆಗೆ ಶೌಚಾಲಯ ಹಾಗೂ ವಿದ್ಯುತ್ ಸಂಪರ್ಕ ಇಲ್ಲದೇ ವ್ಯಾಪಾರಸ್ಥರೂ ಹಾಗೂ ಗ್ರಾಹಕರು ಸಮಸ್ಯೆಗೆ ಬಿದ್ದಿದ್ದಾರೆ.
ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆಪ್ಟಂಬರ್ 18 ರಂದು ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ರೂ.17.22 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಮುಚ್ಚು ಹರಾಜುಕಟ್ಟೆಯ ಕಟ್ಟಡ ಮಣಿನಾಲ್ಕೂರು ಗ್ರಾಮ ಪಂಚಾಯತ್ಗೆ ಹಸ್ತಾಂತರಗೊಂಡಿರುತ್ತದೆ. ಕಳೆದ ನಾಲ್ಕು ವಾರಗಳಲ್ಲಿ ಹರಾಜು ಕಟ್ಟೆಯಲ್ಲಿ ವಾರದ ಸಂತೆ ಪ್ರಾರಂಭಾವಾಗಿದೆ. ಮೊದಮೊದಲಿಗೆ ಕೆಲವೇ ಸಂತೆ ವ್ಯಾಪಾರಿಗಳು ಬಂದಿದ್ದು, ಈಗ ವಾರದಿಂದ ವಾರಕ್ಕೆ ಸಂತೆಕಟ್ಟೆಯಲ್ಲಿ ಮಾರಾಟ ಮಾಡುವವರ ಸಂಖ್ಯೆಯು ಹೆಚ್ಚುತ್ತಾ ಹೋಗಿದೆ. ಸ್ಥಳೀಯವಾಗಿ ಮಂಗಳವಾರ ಯಾವುದೇ ಸಂತೆ ಇಲ್ಲದಿರುವುದರಿಂದ ಸಂತೆ ವ್ಯಾಪಾರಿಗಳಿಗೆ ಅನುಕೂಲವಾಗಲೇಂದೇ ನಿಗದಿ ಪಡಿಸಲಾಗಿದೆ.
ಉಪ್ಪಿನಂಗಡಿ, ಬೆಳ್ತಂಗಡಿ, ಪುತ್ತೂರು, ಕಲ್ಲಡ್ಕ, ಸುಳ್ಯ, ವಾಮದಪದವು, ಮೂಡಬಿದ್ರೆ, ಹೀಗೆ ನಾನಾ ಕಡೆಗಳಿಂದ ಬರುವ ಸಂತೆ ವ್ಯಾಪಾರಿಗಳು ಮಣಿನಾಲ್ಕೂರು ಸಂತೆ ಕಟ್ಟೆಯಲ್ಲಿ ಠಿಕಾಣಿ ಹೂಡಿ ವ್ಯಾಪಾರಕ್ಕೆ ನಿರತರಾಗಿರತ್ತಾರೆ. ಈಗ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಗ್ರಾಮೀಣ ಭಾಗದ ಜನರು ಸಾಮಾಗ್ರಿಗಳನ್ನು ಪಡೆದುಕೊಳ್ಳಲು ಬರುತ್ತಿದ್ದು ಮಧ್ಯಾಹ್ನ ನಂತರ ಗ್ರಾಹಕರ ಸಂಖ್ಯೆ ಕಡಿಮೆ ಕಾಣುತ್ತಿದೆ.
ಶೌಚಾಲಯ ಮತ್ತು ವಿದ್ಯುತ್ ಸಂಪರ್ಕ ಇಲ್ಲ: ಸುಸಜ್ಜಿತವಾಗಿ ನಿರ್ಮಾಣವಾದ 17.22 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಮುಚ್ಚು ಹರಾಜು ಸಂತೆಯಲ್ಲಿ ಶೌಚಾಲಯದ ಕೊರತೆ ಎದ್ದು ಕಾಣುತ್ತಿದೆ. ದೂರದೂರಿಂದ ಬರುವ ಮಾರಾಟಗಾರರಿಗೆ ತಮ್ಮ ಬಹಿರ್ದೆಸೆಗೆ ಗುಡ್ಡ ಪ್ರದೇಶ ಇಲ್ಲವೇ ಬಯಲು ಪ್ರದೇಶವನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ದೂರದ ಊರಿನ ಅವರಿಗೆ ಈ ಊರಿನ ಪರಿಚಯವೂ ಇಲ್ಲದೆ ಇರುವುದರಿಂದ ಅವರು ಮುಜುಗರಕ್ಕೆ ಒಳಗಾಗುವ ಸಂತೆಕಟ್ಟೆಗೆ ವಿದ್ಯುತ್ ಸಂಪರ್ಕವೂ ಇದುವರೆಗೂ ಆಗಿಲ್ಲ. ವಗ್ಗ ಸಂತೆ ಕಟ್ಟೆಯ ನಂತರ ಇರುವುದು ಉಪ್ಪಿನಂಗಡಿ ಸಂತೆಕಟ್ಟೆ. ಹಾಗಾಗಿ ಮಣಿನಾಲ್ಕೂರು, ಅಲ್ಲಿಪಾದೆ, ಸರಪಾಡಿ, ಉಳಿ, ಅಜಿಲಮೊಗರು ಹೀಗೆ ಕೆಲವು ಭಾಗದಲ್ಲಿ ಸಂತೆ ಇಲ್ಲದಿರುವುದರಿಂದ ಮಣಿನಾಲ್ಕೂರು ಸಂತೆಯಿಂದ ಸುತ್ತಲಿನ ಹಳ್ಳಿಯ ನಿವಾಸಿಗಳಿಗೆ ಸಂತೆಕಟ್ಟೆಯಿಂದ ಪ್ರಯೋಜನವಾದೀತು.
ಆದರೆ ಪ್ರಯೋಜನವಿದ್ದರೂ ಸರಿಯಾದ ವ್ಯವಸ್ಥೆ ಇಲ್ಲದೆ ಇರುವುದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದೆ. ಯಾವುದೇ ಹೊಸ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವಾಗ ಅದನ್ನು ವ್ಯವಸ್ಥಿತವಾಗಿ ಮಾಡಿ ಜನರ ಉಪಯೋಗಕ್ಕೆ ಸಿಗುವಂತೆ ಮಾಡಬೇಕು. ಅದರ ಬದಲು ಆಗಬಹುದಾದ ವ್ಯವಸ್ಥೆ ಮಾಡಿ ಮತ್ತೆ ಜನರಿಗೆ ತೊಂದರೆಯಾದ ಮೇಲೆ ಅದರ ಬಗ್ಗೆ ಚಿಂತೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ.