


ವಿಟ್ಲ: 2018ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಸರಕಾರದಿಂದ ಪ್ರಕಟಗೊಂಡಿದ್ದು, ಮಂಗಳೂರು ಸಮೀಪದ ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್ ಆಗಿದ್ದ, ಪ್ರಸ್ತುತ ಬೆಂಗಳೂರು ವಿವೇಕನಗರ ಇನ್ಸ್ಪೆಕ್ಟರ್ ಆಗಿರುವ ರಫೀಕ್ ಕೆ.ಎಂ. ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ಘೋಷಿಸಲಾಗಿದೆ.
ವಿಟ್ಲ ಸಮೀಪದ ಕೆಲಿಂಜ ನಿವಾಸಿ ಅಬ್ದುಲ್ ಖಾದರ್ ನೆಬಿಸ ದಂಪತಿ ಪುತ್ರರಾಗಿರುವ ರಫೀಕ್ ಕೆ.ಎಂ. ಅವರ 14 ವರ್ಷದ ಪೊಲೀಸ್ ವೃತ್ತಿಯಲ್ಲಿ ಪ್ರಾರಂಭದಲ್ಲಿ ಮೈಸೂರು ಜಿಲ್ಲೆಯ ಹುಣಸೂರು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕೆಲಸ ಆರಂಭಿಸಿದರು. ನಂತರ ನಂಜನಗೂಡು, ಪಿರಿಯಾಪಟ್ಟಣ ಹಾಗೂ ಮಂಗಳೂರಿನ ಕದ್ರಿ ಎಸ್ ಐ ಆಗಿ ಕರ್ತವ್ಯ ನಿರ್ವಹಿಸಿ ಜನಮೆಚ್ಚುಗೆ ಪಡೆದರು. ನಾಲ್ಕು ವರ್ಷದ ಹಿಂದೆ ಭಡ್ತಿ ಪಡೆದು ಮಂಗಳೂರು ಕಮಿಷನರ್ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಆದರು. ಬಳಿಕ ಪಣಂಬೂರು ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಪ್ರಮುಖವೆನಿಸಿದ ರೇಪ್ ಕೇಸ್ ಜಾಲವೊಂದನ್ನು ಬೇಧಿಸಿ ರಾಜ್ಯದ ಗಮನಸೆಳೆದರು. ತನ್ನ ವೃತ್ತಿ ಜೀವನದಲ್ಲಿ ಹಲವಾರು ಕೇಸುಗಳನ್ನು ಬೇಧಿಸಿ ಅಪರಾಧಿಗಳನ್ನು ಮಟ್ಟ ಹಾಕಿದ ಕೀರ್ತಿ ಇವರಿಗಿದೆ. ಪ್ರಸ್ತುತ ಕಳೆದ ಒಂದು ವರ್ಷದಿಂದ ಬೆಂಗಳೂರಿನ ವಿವೇಕನಗರ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.





