ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಶಿಶುಮಂದಿರದಲ್ಲಿ ಅಮ್ಮನ ಪಾದಪೂಜೆ ಮತ್ತು ಪಾಲಕರ ಸಭೆ ವೇದವ್ಯಾಸ ಸಭಾಂಗಣದಲ್ಲಿ ನಡೆಯಿತು. ಶ್ರೀರಾಮ ಶಿಶುಮಂದಿರದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ಜರಗಿತು. ಶಿಶುಮಂದಿರದಲ್ಲಿ ಶಿಕ್ಷಣ ಪಡೆಯುತ್ತಿರುವ ಮಕ್ಕಳು ತಮ್ಮ ಅಮ್ಮನ ಪಾದಪೂಜೆ ಮಾಡಿದರು.
ಅಮ್ಮಂದಿರನ್ನು ಬೆಂಚಿನ ಮೇಲೆ ಸಾಲಾಗಿ ಕುಳ್ಳಿರಿಸಿ, ಕೇವಲ ಪಾದ ಮಾತ್ರ ಕಾಣುವಂತೆ ಪರದೆ ಕಟ್ಟಲಾಗಿತ್ತು. ಮಕ್ಕಳು ತಮ್ಮ ತಮ್ಮ ಅಮ್ಮನ ಪಾದವವನ್ನು ಗುರುತಿಸಿ, ಅದರ ಪಕ್ಕದಲ್ಲಿಯೇ ಕುಳಿತುಕೊಂಡದ್ದು ವಿಶೇಷವಾಗಿತ್ತು. ನಂತರ ಪರದೆಯನ್ನು ಬಿಚ್ಚಲಾಗಿತ್ತು. ಮಕ್ಕಳು ಅಮ್ಮನ ಪಾದಗಳಿಗೆ ನೀರು ಹಾಕಿ, ಅರಶಿನ ಕುಂಕುಮ ಹಚ್ಚಿ, ಹೂವನ್ನ ಅರ್ಪಿಸಿ ಪಾದಪೂಜೆ ಮಾಡಿದರು. ಅಮ್ಮಂದಿರು ಮಕ್ಕಳಿಗೆ ಅಕ್ಷತೆ ಹಾಕಿ, ಸಿಹಿ ತಿನ್ನಿಸಿ ಆಶೀರ್ವದಿಸಿದರು.ಒಟ್ಟು 117 ಮಕ್ಕಳ ಅಮ್ಮಂದಿರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಆ ನಂತರ ನಡೆದ ಪಾಲಕರ ಸಭೆಯಲ್ಲಿ ಪಾಲಕರು ತಮ್ಮ ಮಕ್ಕಳಲ್ಲಿ ಆದ ಬದಲಾವಣೆಗಳನ್ನು ಹಾಗೂ ಪಾದ ಪೂಜೆ ಕಾರ್ಯಕ್ರಮದ ಅನಿಸಿಕೆಗಳನ್ನು ಹಂಚಿಕೊಂಡರು.
ತಾನು ತನ್ನ ಜೀವನದಲ್ಲಿ ಯಾವತ್ತೂ ತನ್ನ ಅಮ್ಮನ ಪಾದ ಪೂಜೆ ಮಾಡದೆ ಇದ್ದರೂ, ತನ್ನ ಮಗು ಪಾದಪೂಜೆ ಮಾಡಿರುವುದಕ್ಕೆ ನನಗೆ ತುಂಬಾ ಸಂತೋಷವಾಯಿತು. ಮಗಳು ಪಾದಪೂಜೆ ಮಾಡಿದ ಕಾರಣ ತನಗೆ ತನ್ನ ಅಮ್ಮನ ಪಾದಪೂಜೆ ಮಾಡಬೇಕು ಅಂತ ಅನಿಸಿದೆ ಎಂದು ಒಬ್ಬ ತಾಯಿ ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು. ಹಾಗೆಯೇ ತಾಯಂದಿರು ತಮ್ಮ ಮಕ್ಕಳು ಪಾದವನ್ನು ಗುರುತಿಸಿ ಕುಳಿತುಕೊಂಡಿರುವುದರ ಬಗ್ಗೆ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಪಾಲಕರಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷ ಬಿ. ನಾರಾಯಣ ಸೋಮಾಯಾಜಿ, ಡಾ. ಕಮಲಾ ಭಟ್ ಹಾಗೂ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಶಿಶುಮಂದಿರದ ಮಕ್ಕಳು ಪ್ರಾರ್ಥನೆ ಮಾಡಿದರು. ಗುಲಾಬಿ ಸ್ವಾಗತಿಸಿ, ಶಾಂತಲಕ್ಷ್ಮೀ ವಂದಿಸಿದರು. ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು.