






ಮುಂಬಯಿ: ಇನ್ಫೋಸಿಸ್ ಫೌಂಡೇಶನ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಿತಿ ಸಹಯೋಗದೊಂದಿಗೆ ಉತ್ತರ ಕರ್ನಾಟಕ ಲೇಖಕಿಯರ ಸಂಘ ವತಿಯಿಂದ 2018ನೇ ಸಾಲಿನ ಸಾಹಿತ್ಯ ಪ್ರಶಸ್ತಿಗೆ ಬೃಹನ್ಮುಂಬಯಿನ ಹಿರಿಯ ಲೇಖಕಿ ಡಾ| ಮಮತಾ ಟಿ.ರಾವ್ ಆಯ್ಕೆಯಾಗಿದ್ದಾರೆ. ಡಾ| ಮಮತಾ ರಾವ್ ರಚಿತ ಜಯಂತ್ ಕಾಯ್ಕಿಣಿ ಅವರ ಕಥಾನಾವರಣ ವಿಮರ್ಶಾ ಕೃತಿ ಈ ಪ್ರಶಸ್ತಿಗೆ ಭಾಜನವಾಗಿದೆ. ಪ್ರಶಸ್ತಿಯು ರೂಪಾಯಿ ಹತ್ತು ಸಾವಿರ ನಗದು, ಪ್ರಶಸ್ತಿಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ. ಬರುವ ಮಾರ್ಚ್ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜರುಗಲಿದೆ.
ಡಾ| ಮಮತಾ ರಾವ್ ಅವರ ಗಿರೀಶ್ ಕಾರ್ನಾಡ್ ಅವರ ನಾಟಕಗಳಲ್ಲಿ ಸ್ತ್ರೀ, ಮುಂಬಯಿ ಕನ್ನಡ ಕಥಾ ಸಾಹಿತ್ಯ, ಸಾಹಿತ್ಯ ಸಹವಾಸ, ಸಾಹಿತ್ಯ ಸಂಚಯ, ಸಾಹಿತ್ಯ ಸಮುದಿತ ಎಂಬ ಮೂರು ವಿಮರ್ಶಾ ಲೇಖನಗಳ ಸಂಗ್ರಹ ಮಾತ್ರವಲ್ಲದೆ ಕೈಲಾಸಾಧಿಪತಿಯ ಮನೆಯಂಗಳದಲ್ಲಿ (ಪ್ರವಾಸ ಕಥನ) ಪ್ರಕಟಗೊಂಡಿದೆ. ಮೈಸೂರು ಅಸೋಸಿಯೇಶನ್ ಮುಂಬೈ ಇತ್ತೀಚೆಗೆ ಆಯೋಜಿಸಿದ್ದ ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-೨೦೧೯ರಲ್ಲಿ ಮಮತಾ ರಾವ್ ರಚಿತ ಚಂದ್ರನಖಾಯಣ ಚೊಚ್ಚಲ ನಾಟಕವು ದ್ವಿತೀಯ ಬಹುಮಾನ ಪಡೆದಿತ್ತು. ಕನ್ನಡ ಲೇಖಕಿಯರ ಬಳಗ ಮುಂಬಯಿ ‘ಸೃಜನಾ’ ಸಂಸ್ಥೆಯ ಸಕ್ರೀಯ ಸದಸ್ಯೆ ಆಗಿರುವ ಇವರು ಸಜ್ಜನ, ಸಹೃದಯಶೀಲಾ ಲೇಖಕಿಯಾಗಿದ್ದಾರೆ.





