ವಿಟ್ಲ: ಪ್ರತಿಯೊಬ್ಬರ ಸಹಕಾರ, ಕೂಡುವಿಕೆಯಿಂದ ಬ್ರಹ್ಮಕಲಶೋತ್ಸವ ಯಶಸ್ವಿಯಾಗುವುದು. ಪ್ರತಿಯೊಬ್ಬರು ಏಕ ಮನಸ್ಸಿನಿಂದ ಸಹಭಾಗಿಗಳಾಗಬೇಕು. ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಬೇಕೆಂದು ಬಳಂತಿಮೊಗರು ಶ್ರೀ ದೈವಗಳ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ ತಿಳಿಸಿದರು.
ಅವರು ಗುರುವಾರ ಎ.೧೫-ರಿಂದ ೨೦ರ ತನಕ ನಡೆಯುವ ಪುಣಚ ಗ್ರಾಮದ ಬಳಂತಿಮೊಗರು ಶ್ರೀಮಲರಾಯ, ಮಹಿಷಂದಾಯ, ಧೂಮಾವತಿ, ಪಂಜುರ್ಲಿ, ಕಲ್ಲುರ್ಟಿ, ಕಲ್ಕುಡ, ನೆತ್ತರ್ಕಣ ಮತ್ತು ಪರಿವಾರ ದೈವಗಳ ದೈವಸ್ಥಾನಗಳ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಜ್ಪೆ ಏರ್ಪೋರ್ಟ್ನ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಪದ್ಮನಾಭ ಪಿ.ಎಸ್. ಮಾತನಾಡಿ ಎಲ್ಲರೂ ಕಾರ್ಯಕರ್ತರಂತೆ ದುಡಿದಾಗ ಬ್ರಹ್ಮಕಲಶೋತ್ಸವದಂತಹ ದೊಡ್ಡ ಕಾರ್ಯಗಳೂ ನಿರಾಳವಾಗಿ ನಡೆಯುವುದು ಎಂದರು.
ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಿ. ರಾಮಕೃಷ್ಣ ಶಾಸ್ತ್ರಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗೋಪಾಲ ಕೆಮ್ಮಿಂಜೆ, ಮಾರ್ಗದರ್ಶಕ ಮಂಡಳಿಯ ವಿಶ್ವನಾಥ ಭಟ್ ಮುಂಡೋವು, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಗಣೇಶ ಪೂಜಾರಿ ಉಪಸ್ಥಿತರಿದ್ದರು.
ಸಮಿತಿಯ ರಾಮಕೃಷ್ಣ ಮೂಡಂಬೈಲು ಸ್ವಾಗತಿಸಿದರು. ಅಭಿಷೇಕ್ ವಂದಿಸಿದರು. ರವಿಚಂದ್ರ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿದರು.