ಬಂಟ್ವಾಳ: ಕಕ್ಯಪದವು ಶ್ರೀ ಕಡಂಬಿಲ್ತಾಯಿ ಕೊಡಮಣಿತ್ತಾಯಿ, ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದಲ್ಲಿ ಫೆ.14 ಶುಕ್ರವಾರದಿಂದ ಫೆ.17 ಸೋಮವಾರದ ವರೆಗೆ ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ ನಡೆಯಲಿದೆ.
ಫೆ.14ರ ಸಂಜೆ 6 ಗಂಟೆಗೆ ಬಾರ್ದಡ್ಡು ಗುತ್ತಿನಿಂದ ಕಡಂಬಿಲ್ತಾಯಿ, ಕೊಡಮಣಿತ್ತಯಿ ದೈವಗಳ ಭಂಡಾರ ಬರುವುದು, ಕಕ್ಯಗುತ್ತಿನಿಂದ ದೈವಂಕುಳ ಭಂಡಾರ ಬಂದು ನವಕಕಲಶ “ಪ್ರಧಾನ ಹೋಮ”, ಧ್ವಜಾರೋಹಣ ಗ್ರಾಮ ಸಂಕ್ರಾತಿ ಸೇವೆ ನಡೆಯಲಿದೆ. ಸಂಜೆ 7ರ ನಂತರ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಬಳಿಕ ಅನ್ನ ಸಂತರ್ಪಣೆ, ದೈವಂಕುಲ ನೇಮೋತ್ಸವ ನಡೆಯಲಿದೆ.
ಫೆ.15ರ ಸಂಜೆ 6.30ಕ್ಕೆ ಯಕ್ಷಗಾನ ಹಾಸ್ಯ-ನಾಟ್ಯ ವೈಭವ ನಡೆಯಲಿದೆ. ಅನ್ನಸಂತರ್ಪಣೆ ಬಳಿಕ ಕಡಂಬಿಲ್ತಾಯಿ ಕೊಡಮಣಿತ್ತಾಯಿ ದೈವಗಳ ಬಲಿ ಮತ್ತು ನೇಮೋತ್ಸವ ನಡೆಯಲಿದೆ.
ಫೆ16ರ ಸಂಜೆ 7 ರಿಂದ ಧಾರ್ಮಿಕ ಸಭೆ ನಡೆಯಲಿದೆ. ಇದರ ಉದ್ಘಾಟಕರಾಗಿ ಧಾರ್ಮಿಕ ದತ್ತಿ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಗಮಿಸಲಿರುವರು. ಮಾಜಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಆಗಮಿಸಲಿರುವರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ನಂತರ ಅನ್ನಸಂತರ್ಪಣೆ. ರಾತ್ರಿ 10.30ಕ್ಕೆ ಬೈದೆರ್ ಗಳು ಗರಡಿ ಇಳಿಯುವುದು, ಸುಡುಮದ್ದು ಪ್ರದರ್ಶನ, ಮಾಣಿಬಾಲೆ ನೇಮೋತ್ಸವ ನಡೆದು, ನಂತರ 11.30 ರಿಂದ ವಿದಾತ್ರಿ ಕಲಾವಿದರು ಕೈಕಂಬ ಕುಡ್ಲ ಇವರಿಂದ ಚಲನಚಿತ್ರ ನಟ ರಮೇಶ್ ರೈ ಕುಕ್ಕುವಳ್ಳಿ ಅವರ ನಿರ್ದೇಶನದ ತುಳು ನಾಟಕ ಕುಸಲ್ ಬೊಡ್ಚಿ ನಡೆಯಲಿದೆ.
ಫೆ.17ರ ಬೆಳಿಗ್ಗೆ ಕೊಡಮಣಿತ್ತಯ ಸ್ಥಾನದ ನವಕಕಲಶ ಪ್ರಧಾನ ಹೋಮ ಹೂವಿನ ಪೂಜೆಯ ನಂತರ ಶ್ರೀ ಕೊಡಮಣಿತ್ತಯ ದೈವಗಳ ನೇಮೋತ್ಸವ ನಡೆಯಲಿರುವುದು. ಆ ಬಳಿಕ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಅಸ್ರಣ್ಣ ರಾಜೇಂದ್ರ ಅರ್ಮುಡ್ತಾಯ ಹಾಗೂ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ ತಿಳಿಸಿದ್ದಾರೆ.