ಪುತ್ತೂರು: ಪುತ್ತೂರಿನ ಟೌನ್ ಬ್ಯಾಂಕ್ ಹಾಲ್ ನಲ್ಲಿ ಆಯೋಜಿತವಾಗಿರುವ ಪುಸ್ತಕ ಹಬ್ಬ ಕಾರ್ಯಕ್ರಮದಲ್ಲಿ ಜನವರಿ 19 ರ ಸಂಜೆ 4 ಗಂಟೆಗೆ ಶ್ರೀಮತಿ ಕವಿತಾ ಅಡೂರು ಅವರು ರಚಿಸಿರುವ ’ಪದ ಕುಸಿಯೆ ನೆಲವಿಹುದು’ ಎಂಬ ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗಗಳ ವ್ಯಾಖ್ಯಾನವುಳ್ಳ ಪುಸ್ತಕವು ಬಿಡುಗಡೆಯಾಗಲಿದೆ. ಕಳೆದೆರಡು ವರುಷಗಳಿಂದ ವಿಜಯವಾಣಿ ದೈನಿಕದಲ್ಲಿ ಪ್ರಕಟವಾಗುತ್ತಿರುವ ’ಕಗ್ಗದ ಬೆಳಕು ಅಂಕಣ’ ಬರಹದಿಂದ ಆಯ್ದ ನೂರ ಎಂಟು ಕಗ್ಗಗಳನ್ನು ಈ ಪುಸ್ತಕದಲ್ಲಿ ಪೋಣಿಸಲಾಗಿದೆ. ಹಿರಿಯ ವಿದ್ವಾಂಸರಾದ ಪಾದೆಕಲ್ಲು ವಿಷ್ಣುಭಟ್ ಅವರು ಈ ಪುಸ್ತಕಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ.
ಜನಪ್ರಿಯ ಕವಿ ಶ್ರೀ ಸುಬ್ರಾಯ ಚೊಕ್ಕಾಡಿಯವರು ಕೃತಿ ಅನಾವರಣ ಮತ್ತು ಸಮೀಕ್ಷೆಯನ್ನು ನಡೆಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ವಿ.ಜಿ ಪ್ರತಿಷ್ಠಾನದ ಸಂಚಾಲಕರಾದ ಶ್ರೀ ಕನಕರಾಜು ಸಿ. ಅವರು ವಹಿಸಲಿದ್ದಾರೆ. ಡಿ.ವಿ.ಜಿ ಗೀತಗಾಯನವನ್ನು ಶ್ರೀ ರಾಮಪ್ರಸಾದ್ ಕಾಂಚೋಡು ಅವರು ನಡೆಸಿಕೊಡಲಿದ್ದಾರೆ. ಪುತ್ತೂರಿನ ಜ್ಞಾನಗಂಗಾ ಪುಸ್ತಕ ಮಳಿಗೆಯು ಪ್ರಕಟಿಸುತ್ತಿರುವ ಈ ಪುಸ್ತಕವು, ಬಿಡುಗಡೆಯ ಪ್ರಯುಕ್ತ ಆ ದಿನ ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ.