ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆಯು ಈಗಾಗಲೇ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಾಕಷ್ಟು ಪರ ವಿರೋಧ ಚರ್ಚೆಯಾಗಿ ಕಾನೂನು ಆಗಿ ಅನುಮೋದನೆಗೊಂಡು ಸಂವಿಧಾನಾತ್ಮಕ ಮಾನ್ಯತೆ ಪಡೆದಿದ್ದು, ಈ ಕಾನೂನನ್ನು ಎಲ್ಲಾ ರಾಜ್ಯಗಳು ಪಾಲನೆ ಮಾಡಬೇಕಾಗಿದೆ.ಆದರೆ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮುಸ್ಲಿಂ ಸಮುದಾಯವನ್ನು ತಪ್ಪು ದಾರಿಗೆಳೆದು ಅವರನ್ನು ಶಾಶ್ವತ ಮತಬ್ಯಾಂಕ್ಗೊಳಿಸುವ ಏಕೈಕ ಉದ್ದೇಶದಿಂದ ಅಮಾಯಕ ಮುಸ್ಲಿಂ ಸಮುದಾಯವನ್ನು ಬೀದಿಗಿಳಿಸಿ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದನ್ನು ಬಂಟ್ವಾಳ ತಾಲೂಕಿನ ಮಾಜಿ ಎಪಿಎಂಸಿ ಅಧ್ಯಕ್ಷ, ಬಿಜೆಪಿ ಮುಖಂಡ ರೋನಾಲ್ಡ್ ಡಿಸೋಜ ಅಮ್ಟಾಡಿ ಅವರು ಖಂಡಿಸಿದ್ದಾರೆ. ಈ ಕಾಯ್ದೆಯು ಧಾರ್ಮಿಕ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಪೌರತ್ವ ನೀಡುವ ಕಾನೂನು ಆಗಿದ್ದು, ಯಾವ ಭಾರತೀಯನ ಪೌರತ್ವ ಕಸಿಯುವ ಕಾಯ್ದೆಯಾಗಿರುವುದಿಲ್ಲ, ಇದನ್ನು ಜಾರಿಗೆ ತರಲು ಈ ಹಿಂದೆ ಕಾಂಗ್ರೆಸ್ ಸರಕಾರವೇ ನಿರ್ಧರಿಸಿದ್ದು, ಈಗ ರಾಜಕೀಯ ಉದ್ದೇಶಕ್ಕೋಸ್ಕರ ಪ್ರತಿಭಟನೆ ನಡೆಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಪೌರತ್ವ ತಿದ್ದಪಡಿ ಕಾಯ್ದೆಯು ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಶ್ರಯ ಕಲ್ಪಿಸುವ ಉದ್ದೇಶದಿಂದ ಮಾಡಿರುವ ಕಾಯ್ದೆಯಾಗಿದ್ದು, ಸಂವಿಧಾನದ ಆಶಯದ ಪ್ರಕಾರ ದುರ್ಬಲರನ್ನು ರಕ್ಷಿಸುವ ಉದ್ದೇಶ ಹೊಂದಿದ್ದು, ಎಲ್ಲಾ ಸಮುದಾಯದವರು ಇದನ್ನು ಬೆಂಬಲಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.