ಬಂಟ್ವಾಳ: ಕಾರೊಂದು ಸೇತುವೆಯ ನಿರ್ಮಾಣದ ಗುಂಡಿಗೆ ಬಿದ್ದು ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿಸಿರೋಡಿನಲ್ಲಿ ನಡೆದಿದೆ.
ಬಂಟ್ವಾಳ ಬೈಪಾಸ್ ಗ್ಯಾರೊಂಜೊಂದರ ಮುಂಭಾಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಗುಂಡಿಗೆ ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಕಾರು ಚಾಲಕ ರಾಜೇಶ್ ಬಂಟ್ವಾಳ ಕಡೆಯಿಂದ ಬಿಸಿರೋಡು ಕಡೆಗೆ ಬರುತ್ತಿದ್ದ ವೇಳೆ ರಸ್ತೆ ಕಾಣದೆ ಕಾರು ಗುಂಡಿಗೆ ಬಿದ್ದಿದೆ.
ಬಿಸಿರೋಡು-ಪುಂಜಾಲಕಟ್ಟೆ ಯವರೆಗೆ ರಸ್ತೆಯ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಯಾವುದೇ ಮುನ್ಸೂಚನೆಯ ಫಲಕ ಹಾಕದೇ ಇರುವುದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಕಾರು ಗುಂಡಿಗೆ ಬಿದ್ದ ಬಳಿಕ ಇಂದು ಬೆಳಿಗ್ಗೆ ಆ ಭಾಗದಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಪುಂಜಾಲಕಟ್ಟೆ ಬಿಸಿರೋಡು ರಸ್ತೆ ಕಾಮಗಾರಿ ಅಲ್ಲಲ್ಲಿ ನಡೆಯುತ್ತಿದ್ದು, ಕೆಲವು ಕಡೆಗಳಲ್ಲಿ ರಸ್ತೆ ಎಲ್ಲಿ ಎಂದು ಕಾಣುತ್ತಿಲ್ಲ. ಜೊತೆಗೆ ಅಪಾಯಕಾರಿಯಾಗಿ ರಸ್ತೆಗಳ ಕಾಮಗಾರಿ ನಡೆಯುವ ವೇಳೆ ಬ್ಯಾರಿಕೇಡ್ ಅಥವಾ ಸೂಚನ ಫಲಕಗಳನ್ನು ಹಾಕಬೇಕು ಎಂಬುದು ಪ್ರಯಾಣಿಕರ ಆರೋಪ.
ಇಂತಹ ಅನೇಕ ಘಟನೆಗಳು ಕಾಮಗಾರಿಯ ಸಂದರ್ಭದಲ್ಲಿ ನಡೆಯುತ್ತಿದ್ದು, ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಹಾಗೂ ಸಂಬಂಧಿಸಿದ ಇಲಾಖೆ ಸಮಸ್ಯೆ ಪರಿಹಾರಕ್ಕೆ ಸೂಕ್ತವಾದ ಕ್ರಮ ಕೈಗೊಳ್ಳುವಂತೆ ಪ್ರಯಾಣಿಕರು ವಿನಂತಿ ಮಾಡಿದ್ದಾರೆ.