

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಪಂಪ್ವೆಲ್ ಮೇಲ್ಸೇತುವೆ ಕುರಿತಂತೆ ನಡೆಯುತ್ತಿರುವ ಸಂಭಾಷಣೆಗಳಿಗೆ ಅಥವಾ ಟ್ರೋಲ್ಗಳ ಕುರಿತಂತೆ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಂಸದ ನಳಿನ್, ನಾನು ಸಂಸದ ಆಗುವ ಮೊದಲೇ ಈ ಕಾಮಗಾರಿಯ ಟೆಂಡರ್ ಆಗಿತ್ತು. ಸಂಸದನಾದ ಬಳಿಕ ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಿ ಕಾಮಗಾರಿಯ ಪರಿಶೀಲನೆ ನಡೆಸಲಾಗಿದೆ. ಆರಂಭದಲ್ಲಿ ಕಂಪನಿಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಬಳಿಕ ಹದಗೆಟ್ಟು ನಾನೇ ಮುಂದೆ ನಿಂತು ಸಾಲದ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಅದಲ್ಲದೇ, ಮಣ್ಣಿನ ವ್ಯವಸ್ಥೆಯನ್ನು ಶಾಸಕರ ಸಹಕಾರದೊಂದಿಗೆ ಮಾಡಲಾಗಿದೆ. ಇದಕ್ಕಿಂತ ಹೆಚ್ಚು ಒಬ್ಬ ಸಂಸದನಾಗಿ ನಾನೇನು ಮಾಡಲು ಸಾಧ್ಯ. ಫ್ಲೈ ಓವರ್ ಕಾಮಗಾರಿ ಮುಕ್ತಾಯಕ್ಕೆ 5 ಬಾರಿ ಡೆಡ್ ಲೈನ್ ನೀಡಲಾಗಿದೆ. ಯಾವಾಗ ಕಾಮಗಾರಿ ಮುಗಿಸುತ್ತೀರಿ ಎಂದು ಪ್ರಶ್ನಿಸಿದ ಅವರು ಲಿಖಿತ ರೂಪದಲ್ಲಿ ಮಾಹಿತಿ ನೀಡಿ ಎಂದ ಅವರು ಕಾಮಗಾರಿ ಮುಗಿಸದಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಕಾಮಗಾರಿಗಾಗಿ ಒಂದು ವರ್ಷದಲ್ಲಿ 500 ಮೀಟಿಂಗ್ ಆಗಿದೆ. ಕಾಮಗಾರಿ ಮುಗಿಸದಿದ್ದರೆ ಚಪ್ಪಲಿಯಲ್ಲಿ ಹೊಡೀರಿ ಅಂತ ಹೇಳಿದ್ರಿ ಆದರೆ ಈಗ ಕಾಮಗಾರಿ ನೀವು ಮುಗಿಸಿಲ್ಲ. ಕಂಪೆನಿ ಅಧಿಕಾರಿಗಳ ಮೇಲೆ FIR ಆಗಿದೆ, ನಿಮ್ಮ ಅಧಿಕಾರಿಗಳನ್ನು ಪೊಲೀಸರು ಆರೆಸ್ಟ್ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಸಭೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ತಲಪಾಡಿಯಿಂದ ಕುಂದಾಪುರದವರೆಗಿನ ಕಾಮಗಾರಿ ಕಳೆದ 12 ವರ್ಷಗಳಿಂದ ನಡೆಯುತ್ತಿದೆ. ಬಹಳಷ್ಟು ಕಾಮಗಾರಿ ನಡೆದಿದ್ದರೂ ಪಂಪ್ವೆಲ್ ಮತ್ತು ತೊಕ್ಕೊಟ್ಟು ಕಾಮಗಾರಿ ಕಳೆದ ಎರಡು ವರ್ಷಗಳಿಂದ ಕುಂಠಿತವಾಗಿದ್ದು, ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಕಂಪನಿ ಪೂರ್ಣಗೊಳಿಸಿತ್ತು. ನಂತರ ಹಣಕಾಸಿನ ತೊಂದರೆಯ ಬಗ್ಗೆ ಕಳೆದ ವರ್ಷ ಕಂಪನಿ ತಿಳಿಸಿದ ಹಿನ್ನೆಲೆಯಲ್ಲಿ 56 ಕೋಟಿ ರೂ.ಗಳ ಸಾಲವನ್ನು ಸರಕಾರ ಜಾಮೀನು ನಿಂತು ಒದಗಿಸುವ ಕೆಲಸವನ್ನು ಮಾಡಲಾಯಿತು. ಆ ಸಂದರ್ಭ 2019ರ ಮೇ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಭರವಸೆಯನ್ನು ಕಂಪನಿ ನೀಡಿತ್ತು. ಆದರೆ ಚುನಾವಣೆ ಹಾಗೂ ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ಮತ್ತೆ ವಿಳಂಬವಾಗಿತ್ತು. ಕಳೆದ ಅಕ್ಟೋಬರ್ನಲ್ಲಿ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಲಿಖಿತ ಭರವಸೆ ನೀಡಿದ ಹಿನ್ನೆಲೆಯಲ್ಲಿ ಜನವರಿ ಪ್ರಥಮ ವಾರದಲ್ಲಿ ಲೋಕಾರ್ಪಣೆ ಮಾಡುವುದಾಗಿ ಹೇಳಿದ್ದೆ. ಆದರೆ ಕಳೆದ ಒಂದು ವಾರದಿಂದ ಹಲವು ಸಭೆ ನಡೆಸಲಾಗಿದ್ದು, ಕಾಮಗಾರಿ ಪೂರ್ಣಗೊಳಿಸಲು ಮತ್ತೆ ಒಂದು ತಿಂಗಳ ಕಾಲಾವಕಾಶವನ್ನು ಕೋರಿರುವುದರಿಂದ ಅದರ ಮೇಲುಸ್ತುವಾರಿಯನ್ನು ಇನ್ನು ಮುಂದೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾಡಳಿತ ವಹಿಸಲಿದೆ. ಕಂಪನಿಯು ಸರಕಾರದ ಹೆಸರು ಹಾಳುವ ಮಾಡುವ ಕೆಲಸ ನಡೆದಿದೆ ಎಂದು ಸಂಸದ ನಳಿನ್ ಕುವಾರ್ ಅಸಮಾಧಾನ ವ್ಯಕ್ತಪಡಿಸಿದರು. ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆ ವಹಿಸಿರುವ ನವಯುಗ ಕಂಪನಿ ಮತ್ತೆ ಒಂದು ತಿಂಗಳ ಸಮಯವನ್ನು ಕೇಳಿದ್ದು, ಅದರ ಸಂಪೂರ್ಣ ಮೇಲುಸ್ತುವಾರಿಯನ್ನು ದ.ಕ. ಜಿಲ್ಲಾಡಳಿತಕ್ಕೆ ವಹಿಸಲಾಗಿದ್ದು, ಅವರೇ ಉದ್ಘಾಟನಾ ದಿನಾಂಕವನ್ನು ನಿಗದಿಪಡಿಸಲಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಪಂಪ್ ವೆಲ್ ಫ್ಲೈ ಓವರ್ ಮುಗಿಯುವರೆಗೆ ಟೋಲ್ ಗೇಟ್ ಕ್ಲೋಸ್ ಮಾಡಿ. ಹಣ ಕೇಳಿದರೆ ನಾನೇ ಮಷ್ಕರ ಕೂರುತ್ತೇನೆ ಎಂದು ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ತಾಕೀತು ಮಾಡಿದ್ದಾರೆ. ಇಂದು ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪಂಪ್ವೆಲ್ ಪ್ಲೈ ಓವರ್ ಕಾಮಗಾರಿ ಜನವರಿ 31 ರೊಳಗೆ ಮುಗಿಯಲಿದೆ ಎಂದು ತಿಳಿಸಿದರು.
ಪಂಪ್ವೆಲ್ ಫ್ಲೈ ಓವರ್ ಕಾಮಗಾರಿ ಪೂರ್ತಿಯಾಗದ ಹಿನ್ನೆಲೆಯಲ್ಲಿ ಸಂಸದ ನಳಿನ್ ಸೂಚನೆಯಂತೆ ತಲಪಾಡಿ ಟೋಲ್ ಗೇಟ್ ಬಂದ್ ಮಾಡಿ ಬಿಜೆಪಿ ಕಾರ್ಯಕರ್ತರು ಬಿಸಿ ಮುಟ್ಟಿಸಿದ್ದಾರೆ.ಕೇರಳ ಗಡಿಭಾಗದ ತಲಪಾಡಿ ಟೋಲ್ ಗೇಟ್ ನಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಸಹಿತ ಪಕ್ಷದ ಮುಖಂಡರು ನವಯುಗ ಮತ್ತು ಟೋಲ್ ಗೇಟ್ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡ್ರು. ಬಳಿಕ ಶಾಸಕರು ನೀವಾಗಿಯೇ ಬಂದ್ ಮಾಡಿದ್ರೆ ಉತ್ತಮ, ಇಲ್ಲವಾದರೆ ನಾವೇ ಬಂದ್ ಮಾಡ್ತೇವೆ ಅಂತ ಎಚ್ಚರಿಕೆ ನೀಡಿದ್ದಾರೆ.
ನಿನ್ನೆ ಡಿಸಿ ಕಚೇರಿಯಲ್ಲಿ ಸಭೆ ನಡೆಸಿದ ವೇಳೆ ಸಂಸದರು ಟೋಲ್ ಗೇಟ್ ಬಂದ್ ಗೆ ಸೂಚನೆ ನೀಡಿದ್ದಾರೆ. ಇಂದು ಸಂಜೆ 6 ಗಂಟೆಯವರೆಗೆ ತಲಪಾಡಿ ಟೋಲ್ ಗೇಟ್ ಬಂದ್ ಆಗಲಿದೆ. ಬಿಜೆಪಿ ಕಾರ್ಯಕರ್ತರು ಅಡ್ಡಿ ಮಾಡಿದ ಹಿನ್ನೆಲೆ ಟೋಲ್ ಸಂಗ್ರಹವನ್ನ ಸ್ಥಗಿತ ಮಾಡಿದ್ದಾರೆ. ಹಾಗಾಗಿ ನವಯುಗ ಸಂಸ್ಥೆಗೆ ಪ್ರತಿಭಟನೆ ಬಗ್ಗೆ ಟೋಲ್ ಮ್ಯಾನೇಜರ್ ಮಾಹಿತಿ ನೀಡಿದರು. ಸಂಜೆ 6 ಗಂಟೆವರೆಗೆ ಟೋಲ್ ಸ್ಥಗಿತಗೊಳಿಸಲು ಬಿಜೆಪಿ ಸೂಚನೆ ನೀಡಿದೆ. ಇಲ್ಲದೇ ಇದ್ದಲ್ಲಿ ಬಲವಂತವಾಗಿ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟೋಲ್ ಗೇಟ್ ಸಂಜೆ 6ರವರೆಗೆ ಬಂದ್ ಆಗಲಿದೆ. ಇನ್ನು ಜ.31ರ ಒಳಗೆ ಪಂಪ್ ವೆಲ್ ಫ್ಲೈ ಓವರ್ ಮುಗಿಯದೇ ಇದ್ದರೆ ಟೋಲ್ ಸಂಪೂರ್ಣ ಬಂದ್ ಮಾಡುವ ಎಚ್ಚರಿಕೆಯನ್ನು ಬಿಜೆಪಿ ಶಾಸಕರು ನೀಡಿದ್ದಾರೆ.








