ವಿಟ್ಲ: ಗೋಳ್ತಮಜಲು ಜೆಮ್ ಪಬ್ಲಿಕ್ಸ್ಕೂಲ್ನಲ್ಲಿ ವಾರ್ಷಿಕೋತ್ಸವ, ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜೆಸಿಐ ರಾಷ್ಟೀಯ ನಿರ್ದೇಶಕಿ ಸೌಜನ್ಯ ಹೆಗ್ಡೆ ಮಾತನಾಡಿ, ಹೆತ್ತವರು ಶಿಕ್ಷಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಅವರ ಬೇಕು ಬೇಡಗಳಿಗೆ ಸ್ಪಂದಿಸಬೇಕು. ಮಕ್ಕಳ ಪ್ರತಿಭೆ ಅನಾವರಣಗೊಳ್ಳುವಲ್ಲಿ ಪರಿಸರ ಮತ್ತು ಹಿರಿಯರ ಪಾತ್ರ ಪ್ರಮುಖವಾಗಿದೆ. ಈ ನಿಟ್ಟಿನಲ್ಲಿ ಜೆಮ್ ವಿದ್ಯಾ ಸಂಸ್ಥೆಯೂ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿ ಬಂದಿದೆ. ಸಂಸ್ಥೆಗಳಲ್ಲಿ ದೊರಕುವ ಅವಕಾಶಗಳನ್ನು ಸದ್ಬಳಕ್ಕೆ ಮಾಡಿಕೊಳ್ಳಬೇಕು ಎಂದರು.
ಗೋಳ್ತಮಜಲು ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ನ ಸಂಚಾಲಕ ಅಮಾನುಲ್ಲ ಖಾನ್ ಮಾತನಾಡಿ ಶಿಕ್ಷಣ ಸಂಸ್ಥೆಯಲ್ಲಿ ಸಾಮಾರಸ್ಯದ ಚಿಂತನೆ ಮೂಡಿದಾಗ ಮುಂದಿನ ಪೀಳಿಗೆ ಸೌಹಾರ್ದತೆಯ ಜೀವನ ಸಾಗಿಸಬಹುದು. ಜೆಮ್ ಶಿಕ್ಷಣ ಸಂಸ್ಥೆಯ ಸೇವೆ ಶ್ಲಾಘನೀಯವಾಗಿದ್ದು, ವ್ಯಕ್ತಿತ್ವ ವಿಕಾಸನಕ್ಕೆ ಸಹಕಾರಿಯಾಗಿದೆ ಎಂದರು.
ಫಾತಿಮಾ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಟ್ರಸ್ಟಿ ಜಿ. ಮೊಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಲೆಯ ಸ್ಥಾಪಕ ಶಿಕ್ಷಕಿ ಬೇಬಿರಾಣಿ ಅವರನ್ನು ಸನ್ಮಾನಿಸಲಾಯಿತು. ಶಾಲೆಯ ಶಿಕ್ಷಕರನ್ನು, ಸಿಬ್ಬಂದಿಗಳನ್ನು ಇದೇ ಸಂದರ್ಭ ಗೌರವಿಸಲಾಯಿತು. ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ನ ಸಂಚಾಲಕ ಜಿ. ಅಹಮ್ಮದ್ ಮುಸ್ತಫಾ, ಹಾಜಿ ಜಿ. ಯೂಸುಫ್, ಪಿಟಿಎ ಅಧ್ಯಕ್ಷ ಹಮೀದ್ ಅಲಿ ಗೋಳ್ತಮಜಲು, ಉಪಾಧ್ಯಕ್ಷೆ ಪುಷ್ಪಾ ಗೋಳ್ತಮಜಲು, ಮಕ್ಕಳ ಸುರಕ್ಷಾ ಸಮಿತಿಯ ಸದಸ್ಯ ಹಮೀದ್ ಗೋಳ್ತಮಜಲು, ಮಂಗಳೂರು ಎಂ. ಫ್ರೆಂಡ್ಸ್ನ ಸ್ಥಾಪಕ ರಶೀದ್ ವಿಟ್ಲ, ಶಾಲಾ ನಾಯಕರಾದ ಅಬೂಬಕ್ಕರ್ ಸಿದ್ದೀಕ್, ಹವ್ವ ಸಝ್ಮಿ ಮೊದಲಾದವರು ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯ ಶಿಕ್ಷಕ ನಿರಂಜನ್ ಡಿ. ಸ್ವಾಗತಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೊಹಮ್ಮದ್ ರಫೀಕ್ ವರದಿ ಮಂಡಿಸಿದರು. ಮನ್ಸೂರ ಕಾರ್ಯಕ್ರಮ ನಿರೂಪಿಸಿದರು. ತಾಹೀರಾ ಬಹುಮಾನಿತರ ಪಟ್ಟಿ ಓದಿದರು. ರೇಣುಕಾ, ಪಲ್ಲವಿ ಪರಿಚಯ ಮಾಡಿದರು. ನಮಿತಾ ವಂದಿಸಿದರು.