ಬಂಟ್ವಾಳ : ಪೊಲೀಸ್ ಅನುಮತಿ ಇಲ್ಲದೇ ಮಂಗಳೂರು ಗೋಲಿಬಾರ್ ಘಟನೆಯನ್ನು ಖಂಡಿಸಿ ಪ್ರತಿಭಟನೆಗೆ ಮುಂದಾದ ಗುಂಪನ್ನು ಪೊಲೀಸರು ಚದುರಿಸಿ ಘಟನೆ ಗುರುವಾರ ಬಿ.ಸಿ.ರೋಡು ಸಮೀಪದ ಕೈಕಂಬದಲ್ಲಿ ನಡೆದಿದೆ. ಘಟನೆಯಿಂದ ಕೆಲ ಹೊತ್ತು ಪರಿಸರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಬಿಗುಬಂದೋಬಸ್ತ್ ಒದಗಿಸಿದ್ದಾರೆ. ಪಿಎಫ್ಐ, ಸಿಎಫ್ಐ,ಎಸ್ ಡಿ ಪಿ ಐ, ಸಂಘಟನೆಗಳಿಗೆ ಸೇರಿದ ಫಾಹದ್ ಪರ್ಲಿಯಾ , ಇಸಾಕ್ ಶಾಂತಿ ಅಂಗಡಿ , ನೌಶೀರ್, ಅಶ್ರಫ್ ಸೇರಿದಂತೆ ಸುಮಾರು 30 ಜನ ಯಾವುದೇ ಅನುಮತಿ ಪಡೆಯದೇ ಧ್ವನಿವರ್ಧಕವನ್ನು ಬಳಸಿಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುವ ರೀತಿ ಅಕ್ರಮ ಕೂಟ ಸೇರಿ ಪ್ರತಿಭಟನೆ ನಡೆಸಿದ್ದು, ಈ ವೇಳೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸರು ಕಾನೂನು ಉಲ್ಲಂಘನೆಯ ಬಗ್ಗೆ ತಿಳಿಹೇಳಿದ ಹೊರತಾಗಿಯೂ ಪ್ರತಿಭಟನೆಯನ್ನು ಮುಂದುವರಿಸಿದಾಗ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದಾಗ ಪ್ರತಿಭಟನಾಕಾರರು ಸ್ಥಳದಿಂದ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದು, ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.