


ಮಂಗಳೂರು: ಮಂಗಳೂರಿನಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟವರು ಪೊಲೀಸ್ ತನಿಖೆಯಲ್ಲಿ ಅಪರಾಧಿಗಳೆಂದು ಸಾಬೀತಾದರೆ, ಪರಿಹಾರ ಕೊಡುವುದು ಸೂಕ್ತವಲ್ಲ ಎಂಬುದು ಎಲ್ಲರ ಅಭಿಪ್ರಾಯ. ಈ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಅವರು ಮಂಗಳೂರಿಗೆ ಆಗಮಿಸಿದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ, ಗಲಭೆಯಲ್ಲಿ ಮೃತಪಟ್ಟವರಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ. ಆದರೆ ಪರಿಹಾರಧನ ಇನ್ನೂ ಕೊಟ್ಟಿಲ್ಲ. ಘಟನೆಯಲ್ಲಿ ಸಾವನ್ನಪ್ಪಿದವರು ಆರೋಪ ಪಟ್ಟಿಯಲ್ಲಿ ಇದ್ದಾರೆ. ಒಂದು ವೇಳೆ ಅವರು ಅಪರಾಧಿಗಳೆಂದು ಸಾಬೀತಾದರೆ ಒಂದು ಪೈಸೆಯೂ ಪರಿಹಾರ ಕೊಡುವುದಿಲ್ಲ ಎಂದರು.
ಮಂಗಳೂರು ಗಲಭೆ ಬಗ್ಗೆ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದಿದ್ದೇನೆ. ವಾಹನದಲ್ಲಿ ಕಲ್ಲು ತಂದು ತೂರಾಟ ಮಾಡಲಾಗಿದ್ದು ಇದು ವ್ಯವಸ್ಥಿತ ಷಡ್ಯಂತ್ರವಾಗಿದೆ. ಪೊಲೀಸ್ ಠಾಣೆ ಬಳಿಯ ಶಸ್ತ್ರಾಸ್ತ್ರ ಅಂಗಡಿಗೂ ನುಗ್ಗುವ ಪ್ರಯತ್ನ ಆಗಿತ್ತು. ಈ ಬಗ್ಗೆ ಸಮಗ್ರ ತನಿಖೆ ಮಾಡುತ್ತೇವೆ ಎಂದು ತಿಳಿಸಿದರು.







