ವಿಟ್ಲ: ವಿಟ್ಲ ಬಸವನಗುಡಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯಲ್ಲಿ ಅತ್ಯಂತ ವಿಶಿಷ್ಟ, ವಿಭಿನ್ನ ಚಿಂತನೆಯಲ್ಲಿ ವರ್ಣರಂಜಿತ ಬೆಳಕಿನ ವಿನ್ಯಾಸದೊಂದಿಗೆ ಝಗಮಗಿಸುವ ಆಕರ್ಷಣೀಯ ವೇದಿಕೆಯಲ್ಲಿ ಬರೋಬ್ಬರಿ 1027 ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯ ವೈವಿಧ್ಯಮಯ ವಾರ್ಷಿಕೋತ್ಸವ ನಡೆಯಿತು.
ವಿದ್ಯಾರ್ಥಿಗಳ ಸಂಯೋಜನೆಯಲ್ಲಿ ಸಭಾ ಕಾರ್ಯಕ್ರಮ: ಪ್ರತಿಯೊಂದು ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳೇ ಸಂಯೋಜಿಸಿರುವುದು ವಿಶೇಷವಾಗಿತ್ತು. ಶಾಲಾ ವಿದ್ಯಾರ್ಥಿ ನಾಯಕ ಮೊಹಿದ್ದೀನ್ ಇಲಾನ್ ಅಧ್ಯಕ್ಷತೆಯನ್ನು ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಂಸ್ಥೆಯ ಹಿರಿಯ ವಿದ್ಯಾರ್ಥಿನಿ ಡಾ. ನಿರೀಕ್ಷಾ ಶೆಟ್ಟಿ ಮಾತನಾಡಿ ಗ್ರಾಮೀಣ ಪರಿಸರದಲ್ಲಿದ್ದ ಸಂಸ್ಥೆಯು ದೇಶೀಯ ಸಂಸ್ಕೃತಿಯ ಶಿಕ್ಷಣದ ಮೂಲದೊಂದಿಗೆ ಬೆಳೆದು ಬಂದಿದ್ದು, ರಾಜ್ಯಮಟ್ಟದಲ್ಲಿಯೇ ಗುರುತಿಸಲ್ಪಟ್ಟಿರುವುದು ಯಶೋಗಾಥೆಯಾಗಿದೆ. ಸರ್ವಾಂಗೀಣ ವಿಕಾಸಕ್ಕೆ ಶಿಕ್ಷಣ ಸಂಸ್ಥೆಒತ್ತು ನೀಡಿದೆ ಎಂದರು.
ಗೌರವ ಅತಿಥಿಯಾಗಿ ಭಾಗವಹಿಸಿದ ಮೂಡುಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಭಕ್ತಿಶ್ರೀ ಮಾತನಾಡಿ ಪರಿಶ್ರಮ ಮತ್ತು ನಂಬಿಕೆಯಿದ್ದಾಗ ಜೀವನದಲ್ಲಿ ಯಾವುದೇ ಸವಾಲನ್ನು ನಿರ್ಭಯವಾಗಿ ಕೇವಲ ಸ್ವಾರ್ಥ ಬದುಕು ನೀಡುವುದಕ್ಕಾಗಿ ಶಿಕ್ಷಣ ಎಂಬ ಭಾವನೆ ವಿದ್ಯಾರ್ಥಿಗಳ ಮನಸ್ಸಿನಿಂದ ಹೋಗಬೇಕು. ಉಳಿದವರನ್ನು ಸೋಲಿಸಿ ಗೆಲುವು ಪಡೆಯುವ ಛಲವನ್ನು ಬಿಟ್ಟು ತನ್ನನ್ನು ತಾನೇ ಗೆದ್ದು ಮುನ್ನಡೆಯಬೇಕು ಎಂದರು.
ಮೈತ್ರಿ ಸ್ವಾಗತಿಸಿದರು. ಸಮರ ಖದೀಜ ವಂದಿಸಿದರು. ಇಶಾ ಕಾರ್ಯಕ್ರಮ ನಿರೂಪಿಸಿದರು. ಶ್ರೇಯಾ, ಮೊಹಮ್ಮದ್ ರಿಜ್ವಾನ್, ವೈಭವಿ, ತನ್ವಿ, ಫಾಯಿಝಾ, ಸಮೀಕ್ಷಾ, ಸುಹಾಬ, ಅಲೀಸಾ ಸಹಕರಿಸಿದರು.
ಸನ್ಮಾನ: 2018-19ನೇ ಶೈಕ್ಷಣಿಕ ವರ್ಷದ ಎಸ್ಸೆಸ್ಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ 624 ಅಂಕಗಳೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾದ ಶಿಕ್ಷಣ ಸಂಸ್ಥೆ ವಿದ್ಯಾರ್ಥಿನಿ ಚಿನ್ಮಯಿ ಅವರನ್ನು ಇದೇ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಲ್.ಎನ್.ಕೂಡೂರು ಚಿನ್ನ ಹಾರ, ಸ್ಮರಣಿಕೆಗಳೊಂದಿಗೆ ಸನ್ಮಾನಿಸಿದರು. ಇದರೊಂದಿಗೆ ಶೇ.90 ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನೂ, ರಾಷ್ಟ್ರಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ಸ್ಪೂರ್ತಿ ರೈ ಹಾಗೂ ರಾಜ್ಯ ಮಟ್ಟದ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.
ಯೋಧರಿಗೆ ಗೌರವ ಸಮರ್ಪಣೆ: ವಾರ್ಷಿಕೋತ್ಸವದಲ್ಲಿ 10 ಮಂದಿ ಯೋಧ ವಿದ್ಯಾರ್ಥಿ ಪಾಲಕರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ತ್ರಿವರ್ಣ ಧ್ವಜದೊಂದಿಗೆ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆ ತರಲಾಯಿತು. ಸಂಸ್ಥೆಯ ಎಲ್ಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿ ಧ್ವಜವಂದನೆ ಸ್ವೀಕರಿಸಿದರು.
ಸಂಸ್ಥೆಯ ವಾರ್ಷಿಕ ವರದಿಯನ್ನು ಪ್ರಿನ್ಸಿಪಾಲ್ ಜಯರಾಮ ರೈ ವಾಚಿಸಿದರು. ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ವಂದಿಸಿದರು. ವೈಸ್ ಪ್ರಿನ್ಸಿಪಾಲ್ ಶಾಲಿನಿ ನೋಂಡಾ, ಶಾಲಾ ಆಡಳಿತ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.