ಬಂಟ್ವಾಳ: ಬೆಂಗಳೂರಿನ ಇಂಡಿಯ ಫೌಂಡೇಶನ್ ಫಾರ್ ದ ಆರ್ಟ್ಸ್ ಸಂಸ್ಥೆ ನೀಡುವ “ಕಲಿ-ಕಲಿಸು” ಯೋಜನೆಗೆ ಪತ್ರಕರ್ತ, ರಂಗನಿರ್ದೆಶಕ ಮೌನೇಶ ವಿಶ್ವಕರ್ಮ ಆಯ್ಕೆಯಾಗಿದ್ದಾರೆ.
ಈ ಯೋಜನೆಯನ್ವಯ ಐಎಫ್ಎ ಸಂಸ್ಥೆ ನೀಡುವ ಅನುದಾನದ ನೆರವಿನಲ್ಲಿ ಕಲ್ಲಡ್ಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ “ಕಲಾಬರಹ ಮತ್ತು ಕಲಾಪತ್ರಿಕೆ ” ವಿಷಯದಲ್ಲಿ ತರಬೇತಿ ನೀಡಿ ಮಕ್ಕಳಿಂದಲೇ
ದ್ವೈಮಾಸಿಕ ಕಲಾಪತ್ರಿಕೆಯನ್ನು ಪ್ರಕಟಿಸಲಿದ್ದಾರೆ.
ಪುತ್ತೂರಿನ ಸಂಪ್ಯ ನಿವಾಸಿಯಾಗಿರುವ ಮೌನೇಶ್ ಕಳೆದ ಹದಿನಾರು ವರ್ಷಗಳಿಂದ ಪತ್ರಿಕಾರಂಗ ಹಾಗೂ ಮಕ್ಕಳ ರಂಗಭೂಮಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು,ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ 2012ರಿಂದ 2018 ರ ವರೆಗೆ ಕಾರ್ಯ ನಿರ್ವಹಿಸಿದ್ದಾರೆ. 2007 ರಲ್ಲಿ ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ
ನೀಡುವ ಯುವ ಕಲಾವಿದರ ಸ್ಕಾಲರ್ ಶಿಪ್ ಹಾಗೂ 2011 ರಲ್ಲಿ ಯುನಿಸೆಫ್ ಹಾಗೂ ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರವು ನೀಡುವ “ಮಾಧ್ಯಮ ಫೆಲೋಷಿಫ್″ ಗೆ ಮೌನೇಶ್ ಆಯ್ಕೆಯಾಗಿದ್ದರು. ಬಂಟ್ವಾಳದಿಂದ ಕನ್ನಡ ಪ್ರಭ, ಸುದ್ದಿಬಿಡುಗಡೆ ಪತ್ರಿಕೆಯ ವರದಿಗಾರರಾಗಿರುವ ಮೌನೇಶ್ ಮಕ್ಕಳ ರಂಗಚಟುವಟಿಕೆಯಲ್ಲೂ ಸಕ್ರೀಯರಾಗಿದ್ದು, ಇವರ ಮಕ್ಕಳ ಮಾತು ಕೃತಿಗೆ ಪುಸ್ತಕ ಪ್ರಾಧಿಕಾರದ ಪುರಸ್ಕಾರ ದೊರೆತಿದೆ. 10ಕ್ಕೂ ಅಧಿಕ ಮಕ್ಕಳ ನಾಟಕ, ವಿಜ್ಞಾನ ನಾಟಕಗಳನ್ನು ಬರೆದಿರುವ ಮೌನೇಶ್ ರವರ
ಮಕ್ಕಳ ಹಕ್ಕುಗಳ ಕುರಿತಾದ ಕಿರುನಾಟಕ ಗಳ ಪುಸ್ತಕ ಬಿಡುಗಡೆಗೆ ಸಜ್ಜಾಗುತ್ತಿದೆ. ನಾಟಕ ರಂಗ , ಮಕ್ಕಳ ಹಕ್ಕು ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.