Saturday, October 21, 2023

ವಿದ್ಯುತ್ ಅವಘಡಗಳಿಂದ ಸಂಭವಿಸುವ ಸಾವು-ನೋವುಗಳ ಕುರಿತು ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಸಂಸ್ಥೆಯಿಂದ ಸಹಿ ಸಂಗ್ರಹ ಅಭಿಯಾನ

Must read

ಮುಂಬಯಿ (ಮಂಗಳೂರು),ಸೆ.೨೫: ವಿದ್ಯುತ್ ಅವಘಡಗಳಿಂದ ಸಂಭವಿಸುವ ಸಾವು-ನೋವುಗಳ ಕುರಿತು ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರಗಳ ಗಮನ ಸೆಳೆಯುವ ನಿಟ್ಟಿನಲ್ಲಿ ಮಯೂರ ವರ್ಮ ಸಾಂಸ್ಕೃತಿಕ ಪ್ರತಿಷ್ಠಾನ ಮುಂಬಯಿ ಹಮ್ಮಿಕೊಂಡಿರುವ ಸಹಿ ಸಂಗ್ರಹ ಅಭಿಯಾನಕ್ಕೆ ಕರ್ನಾಟಕ ರಾಜ್ಯದ ಮಾಜಿ ಸಚಿವ, ಮಂಗಳೂರು ಶಾಸಕ ಯು.ಟಿ ಖಾದರ್ ಚಾಲನೆ ನೀಡಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಮಯೂರ ವರ್ಮ ಪ್ರತಿಷ್ಠಾನ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ವಿಶ್ವನಾಥ ದೊಡ್ಮನೆ ಮಾತನಾಡಿ, ಮಯೂರ ವರ್ಮ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಭಂಡಾರಿ ಕಡಂದಲೆ ಸಾರಥ್ಯದಲ್ಲಿ ಸಾಮಾಜಿಕ ಕಳಕಳಿಯೊಂದಿಗೆ ಮುನ್ನಡೆಯುವ ಈ ಸಂಸ್ಥೆಯು ಭಾರತ ಸರಕಾರದ ವಿದ್ಯುತ್ ಇಲಾಖೆಯ ಮುಖ್ಯ ಕಾರ್ಯದರ್ಶಿ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ವಿದ್ಯುತ್ ಅವಘಡಗಳ ಕುರಿತಂತೆ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿ ಈ ಸಹಿ ಅಭಿಯಾನವನ್ನು ನಡೆಸುತ್ತಿರುವುದಾಗಿ ತಿಳಿಸಿದರು.

ವಿದ್ಯುತ್ ಸಂಪರ್ಕವನ್ನು ಒದಗಿಸುವ ಸಂದರ್ಭ ಅದರ ಸಾಧಕ-ಬಾಧಕಗಳನ್ನು ಗಮನಿಸಬೇಕು. ಹಿಂದೆ ವಿದ್ಯುತ್ ತಂತಿ ಎಳೆಯುವ ಸಂದರ್ಭ ಸುರಕ್ಷಾ ತಂತಿ ಎಳೆಯಲಾಗುತ್ತಿತ್ತು. ಆದರೆ ಈಗ ಆ ಕ್ರಮ ಇಲ್ಲ. ಇದರಿಂದಾಗಿ ಮಳೆಗಾಲ ಆರಂಭವಾದಂತೆ ವಿದ್ಯುತ್ ತಂತಿ ತಗಲಿ ಅಸುನೀಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕುರಿತು ಇಲಾಖೆಯ ಗಮನಸೆಳೆಯುವುದು ಈ ಅಭಿಯಾನದ ಉದ್ದೇಶವಾಗಿದೆ. ‘ವೈಜ್ಞಾನಿಕವಾಗಿ ತಂತಿ ಎಳೆಯಿರಿ, ಅಮಾಯಕರ ಜೀವ ಉಳಿಸಿ’ ಎಂಬ ಘೋಷಣೆಯೊಂದಿಗೆ ಈ ಸಹಿ ಸಂಗ್ರಹವನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

೨೦೧೪ರಲ್ಲಿ ಅಸ್ಸಾಂನಲ್ಲಿ ವಿದ್ಯುತ್ ತಂತಿ ಸೈನಿಕರ ಕ್ಯಾಂಪ್ ಮೇಲೆ ಬಿದ್ದು ೧೪ ಸೈನಿಕರು ಮೃತಪಟ್ಟಿದ್ದರು. ಅದೇ ವರ್ಷ ರಾಜಸ್ತಾನದಲ್ಲಿ ಮದುವೆ ದಿಬ್ಬಣದ ಲಾರಿಗೆ ವಿದ್ಯುತ್ ತಂತಿ ತಗಲಿ ೧೫ ಜನರು ಸಾವಿಗೀಡಾಗಿದ್ದರು. ೨೦೧೯ರ ಆಗಸ್ಟ್‌ನಲ್ಲಿ ಕೊಪ್ಪಳದಲ್ಲಿ ಐದು ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು. ಇದೇ ವೇಳೆ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಅವಘಡದಿಂದ ಜಾನುವಾರುಗಳ ಸಾವಿಗೆ ಲೆಕ್ಕವೇ ಇಲ್ಲವಾಗಿದೆ. ಈ ಬಗ್ಗೆ ಇಲಾಖೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬುದು ನಮ್ಮ ಆಶಯ ಎಂದವರು ಹೇಳಿದರು.

ಗೋಷ್ಠಿಯಲ್ಲಿ ಸಂಘಟಕ ರಾಜೇಶ್ ಆಳ್ವ, ಹಿರಿಯ ಪತ್ರಕರ್ತ ಶೇಖರ ಅಜೆಕಾರು ಉಪಸ್ಥಿತರಿದ್ದರು.

More articles

Latest article