ಬಂಟ್ವಾಳ: ವಿಶ್ವಕರ್ಮ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಆಗಿರುವ ಸಮುದಾಯ ಭವನ ನಿರ್ಮಾಣ ದೊಡ್ಡ ಸಾಧನೆ. ಒಂದು ಸಮಾಜದಲ್ಲಿ ಕೆಲವರು ಶ್ರೀಮಂತರು, ಕೊಡುಗೈದಾನಿಗಳು ಇರುತ್ತಾರೆ. ಅವರ ಕೊಡುಗೆಯನ್ನು ಸ್ವೀಕರಿಸಿ ಸಮಾಜಕ್ಕೆ ಒಂದು ಆಸರೆಯನ್ನು ನಿರ್ಮಿಸಿಕೊಳ್ಳುವ ನಿಮ್ಮ ಸಾಧನೆಯು ಅಭಿನಂದನಾರ್ಹ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ಸೆ. 17ರಂದು ವಿಶ್ವಕರ್ಮ ಸಮಾಜ ಸೇವಾ ಸಂಘ (ರಿ) ಜೋಡುಮಾರ್ಗ ಆಶ್ರಯದಲ್ಲಿ ಅಮ್ಟಾಡಿ ಅಜಕಲ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ 26ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಶಿಲೆ ದೇವರ ಮೂರ್ತಿಯಾಗುವುದು ವಿಶ್ವಕರ್ಮರ ಪ್ರಯತ್ನದಿಂದ. ಮರ ಮತ್ತು ಲೋಹವು ಒಂದು ಸುಂದರ ಚಿತ್ರಣವಾಗಿ ಬದಲಾವಣೆ ಆಗುವುದು ವಿಶ್ವಕರ್ಮರ ಸಾಧನೆಗಳಿಂದ. ಸಮಾಜಕ್ಕೆ ಅವರ ಕೊಡುಗೆ ಅನಾಽಯಿಂದ ಇಂದಿನ ತನಕವೂ ಪರಂಪರೆಯಿಂದ ಹರಿದು ಬಂದಿದೆ. ಕಲೆ ವಿಶ್ವಕರ್ಮರ ರಕ್ತದಲ್ಲಿ ಬೆಳೆದು ಬಂದಿದೆ ಎಂದು ಅಭಿನಂದಿಸಿದರು. ಸಮಾಜದ ಅಭಿವೃದ್ದಿಗಾಗಿ ಮಾಡಿರುವ 25 ಲಕ್ಷದ ಬೇಡಿಕೆಯನ್ನು ಸರಕಾರದ ಮಟ್ಟದಲ್ಲಿ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಸಭಾಧ್ಯಕ್ಷತೆ ವಹಿಸಿದ್ದ ಲ| ಸುಧಾಕರ ಆಜಾರ್ಯ ಮಾರ್ನಬೈಲು ಮಾತನಾಡಿ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕು. ಸಮಾಜವು ನಮಗೇನು ಕೊಟ್ಟಿದೆ ಎಂಬ ಧ್ವನಿ ಬರಲಾಗದು. ಸಮಾಜಕ್ಕೆ ನೀಡಿದ ಕೊಡುಗೆಯ ಪ್ರತಿಫಲ ನಮಗೇ ಸಂದಾಯ ಆಗುವುದು. ಸಂಘದ ಸಭಾಂಗಣ ನಿರ್ಮಾಣಕ್ಕೆ ಸರಕಾರದಿಂದ ದೊಡ್ಡ ಸಹಾಯ ಆಗಿದೆ ಎಂದು ತಿಳಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ ವಿಶ್ವಕರ್ಮರು ಸುಸಂಸ್ಕೃತ ಸಾಮಾಜಿಕ ಸ್ಥಾನಮಾನ ಹೊಂದಿದ್ದಾರೆ. ಎಲ್ಲರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ. ಪ್ರಗತಿಪರ ಚಿಂತನೆಯ ಕಾರಣ ವಿಶ್ವಕರ್ಮ ಸಮಾಜಕ್ಕೆ ಇಂತಹ ಒಂದು ಸಮುದಾಯ ಭವನ ಕಟ್ಟುವ ಅವಕಾಶ ಆಗಿದೆ. ಸರಕಾರದ ಮಟ್ಟದಲ್ಲಿ ಅನುದಾನ ಕೊಡಿಸಲು ಪ್ರಯತ್ನಿಸಿದ್ದು ಅದರ ಸದುಪಯೋಗ ಪಡೆದಿದ್ದಾರೆ ಎಂದು ಅಭಿಪ್ರಾಯ ವ್ಯಕ ಮಾಡಿದರು.
ಜಿ.ಪಂ.ಸದಸ್ಯ ಚಂದ್ರಪ್ರಕಾಶ ಶೆಟ್ಟಿ, ಅಮ್ಟಾಡಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ಬೋಳಿಯಾರು ಗ್ರಾ.ಪಂ.ಅಧ್ಯಕ್ಷ ಸತೀಶ್ ಆಚಾರ್ಯ ಜಲಕದ ಕಟ್ಟೆ ಸಭೆ ಉದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಬುದ್ಧ ಶಾಂತಿ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ| ಎಸ್.ಎಂ. ಗೋಪಾಲಕೃಷ್ಣ ಆಚಾರ್ಯ, ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಆಚಾರ್ಯ, ಪಂಚಾಯತ್ ರಾಜ್ ಕಿರಿಯ ಇಂಜಿನಿಯರ್ ಕೃಷ್ಣ ಪತ್ತಾರ್, ಗೋಲ್ಡ್ಸ್ಮಿತ್ ಅಕಾಡೆಮಿ ಸಿಇಒ ವಿವೇಕ್ ಆಚಾರ್ಯ, ಜೋತಿಷಿ, ವಾಸ್ತು ತಜ್ಞ ಬಿ. ಕೆ. ಮೋನಪ್ಪ ಆಚಾರ್ಯ, ಬಾಲಪ್ರತಿಭೆಯಲ್ಲಿ ಕ್ರೀಡಾಪಟು ಸೃಜನ್ ಆಚಾರ್ಯರಿಗೆ ಸಮ್ಮಾನಿಸಿ ಗೌರವಿಸಲಾಯಿತು.
ಲೋಕೇಶ್ ಆಚಾರ್ಯ ಪುಂಜಾಲಕಟ್ಟೆ, ಮನೋಜ್ ಆಚಾರ್ಯ ನಾಣ್ಯ, ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಡಿ.ಆಚಾರ್ಯ, ನಾರಾಯಣ ಆಚಾರ್ಯ ಕಳ್ಳಿಗೆ, ಲೋಕೇಶ್ ಆಚಾರ್ಯ ಪುಷ್ಪಲತಾ ಎಸ್.ಎಂ. ಜನಾರ್ದನ ಆಚಾರ್ಯ, ಕುರಿಯಾಳ ತಿಮ್ಮಪ್ಪ ಆಚಾರ್ಯ, ದೀಪಕ್ ಆಚಾರ್ಯ, ಜಯಚಂದ್ರ ಆಚಾರ್ಯ ಸರಪಾಡಿ, ಯಶೋಧರ ಆಚಾರ್ಯ ಅಲ್ಲಿಪಾದೆ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷರು ಸ್ವಾಗತಿಸಿ, ಸಂದೀಪ್ ಆಚಾರ್ಯ ಭಂಡಾರಿಬೆಟ್ಟು ಪ್ರಸ್ತಾವನೆ ನೀಡಿದರು. ಮೌನೇಶ ವಿಶ್ವಕರ್ಮ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.