


ಬಂಟ್ವಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಲರ್ನರ್ಸ್ ಫೋರಂ ಆಶ್ರಯದಲ್ಲಿ ರಾಷ್ಟ್ರೀಯ ಸದ್ಭಾವನಾ ದಿನವನ್ನು ಆಚರಿಸಲಾಯಿತು.
ಈ ದಿನಾಚರಣೆಯ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸತ್ಯನಾರಾಯಣ ಭಟ್ ಇವರು ಮಾತನಾಡಿ ದೇಶ ಕಂಡ ಅತ್ಯಂತ ಕಿರಿಯ ವಯಸ್ಸಿನ ದಕ್ಷ ಪ್ರಧಾನಿಯಾಗಿದ್ದ ಸನ್ಮಾನ್ಯ ರಾಜೀವ ಗಾಂಧಿಯವರ 75ನೇ ಹುಟ್ಟುಹಬ್ಬದ ಪ್ರಯುಕ್ತ ದೇಶಾದ್ಯಂತ ಈ ದಿನ ಸದ್ಭಾವನಾ ದಿನವನ್ನು ಆಚರಿಸಲಾಗುತ್ತಿದೆ. ಆಧುನಿಕ ಭಾರತದ ಕನಸನ್ನು ಕಂಡ ದೂರದೃಷ್ಠಿಯ ರಾಜೀವ ಗಾಂಧಿಯವರು ದೇಶದ ಏಕತೆ, ಭಾವೈಕ್ಯತೆ, ಜಾತ್ಯಾತೀತತೆ, ಭ್ರಾತೃತ್ವ ಹಾಗೂ ಸಮಗ್ರ ಪ್ರಜಾಪ್ರಭುತ್ವದ ತತ್ವಾದರ್ಶಗಳ ಮೂಲಕ ಪ್ರಗತಿಗೆ ಕಾರಣರಾದವರು. ಅವರ ಆದರ್ಶಗಳನ್ನು ನಾವು ಇಂದು ಪಾಲಿಸೋಣ ಭಾರತಾಂಬೆಯ ಮಕ್ಕಳಾದ ನಾವೆಲ್ಲರೂ ಜಾತಿ, ಧರ್ಮ, ಮತ, ಪಂಥ, ಭಾಷೆ ಹಾಗೂ ಪ್ರಾಂತೀಯ ಭೇದ ಭಾವಗಳನ್ನು ಮರೆತು ಒಬ್ಬರನ್ನೊಬ್ಬರು ಗೌರವಿಸಬೇಕು ಎಂದರು.
ಲರ್ನರ್ಸ್ ಫೋರಂನ ಸಂಯೋಜಕರಾದ ವಿನಯ್ ಎಂ.ಎಸ್ ಸಹಾಯಕ ಪ್ರಾಧ್ಯಾಪಕರು ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಸದ್ಭಾವನಾ ದಿನದ ಆಚರಣೆಯ ಉದ್ದೇಶವನ್ನು ವಿವರಿಸಿದರು. ಸದ್ಭಾವನೆ ಎಂದರೆ ಒಳ್ಳೆಯ ಭಾವನೆ. ನಾವು ಇತರರೊಂದಿಗೆ ವ್ಯವಹರಿಸುವಾಗ ಯಾವುದೇ ಪೂರ್ವಾಗ್ರಹಗಳಿಲ್ಲದೆ ಪ್ರೀತಿ, ವಿಶ್ವಾಸ, ಸೌಹಾರ್ದತೆಯನ್ನು ಮೆರೆಯಬೇಕು ಎಂದರು. ಎಲ್ಲರನ್ನೂ ಸಮಾನವಾಗಿ ಕಾಣುವ ಹೃದಯವಂತಿಕೆ ನಮ್ಮದಾಗಬೇಕು ಎಂದರು. ಅಶ್ವಿತ್ ಬಿ ಉಪನ್ಯಾಸಕರು ರಾಷ್ಟ್ರೀಯ ಭಾವೈಕ್ಯತೆಯ ಕುರಿತು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನಾ ಘಟಕದ ಯೋಜನಾಧಿಕಾರಿಗಳಾದ ಶ್ರೀ ದೇವಿಪ್ರಸಾದ್ ಇವರು ವಿದ್ಯಾರ್ಥಿಗಳಿಗೆ ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿಗಳು ಭಾವೈಕ್ಯತಾ ಗೀತೆಯನ್ನು ಹಾಡುವ ಮೂಲಕ ರಾಷ್ಟ್ರೀಯ ಭಾವೈಕ್ಯತೆಯ ಮಹತ್ವ ಸಾರಿದರು.
ಹನುಮಂತಯ್ಯ ಜಿ.ಹೆಚ್ ಸಹಾಯಕ ಪ್ರಾಧ್ಯಾಪಕರು ಹಾಗೂ ಗ್ರಂಥಪಾಲಕರಾದ ಶ್ರೀನಿವಾಸ ಇವರು ಉಪಸ್ಥಿತರಿದ್ದರು.
ಗೀತಾಕ್ಷಿ ಮತ್ತು ಬಳಗದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ನೀಮಾ ದ್ವಿತೀಯ ಬಿಕಾಂ ಕಾರ್ಯಕ್ರಮವನ್ನು ನಿರೂಪಿಸಿದರು, ಸುಮಲತಾ ದ್ವಿತೀಯ ಬಿಕಾಂ ಸ್ವಾಗತಿಸಿದರೆ, ಆಶ್ರೀತ್ ಪ್ರಥಮ ಬಿಎ ಸರ್ವರಿಗೂ ವಂದಿಸಿದರು.





