






ಬಂಟ್ವಾಳ: ಜೇಸಿಐ ಜೋಡುಮಾರ್ಗ ನೇತ್ರಾವತಿ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಆಶ್ರಯದಲ್ಲಿ ಮಳೆ ನೀರು ಕೊಯ್ಲು ಮೂಲಕ ಅಂತರ್ಜಲ ಹೆಚ್ಚಿಸುವ ಬಗ್ಗೆ ಮಾಹಿತಿ ಶಿಬಿರವನ್ನು ತುಂಬೆಯ ಬಿ. ಎ. ಪದವಿಪೂರ್ವ ಕಾಲೇಜು, ದೀಪಿಕಾ ಪ್ರೌಢಶಾಲೆ, ಮೊಡಂಕಾಪು ಮತ್ತು ಸರಕಾರಿ ಪದವಿಪೂರ್ವ ಕಾಲೇಜು, ಬಿ.ಮೂಡ ಇಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆ ತುಂಬೆಯ ಬಿ. ಎ. ಪದವಿಪೂರ್ವ ಕಾಲೇಜಿನಲ್ಲಿ ನಡೆಯಿತು.
ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಂಗಾಧರ ಆಳ್ವ ರವರು ಮುಖ್ಯ ಅತಿಥಿಯಾಗಿ ಆಗಮಿಸಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಸುದಪಯೋಗಪಡಿಸಿಕೊಳ್ಳುವುದರೊಂದಿಗೆ ಇತರರಿಗೂ ಈ ಮಾಹಿತಿಗಳನ್ನು ಹಂಚಿ ದೇವರು ಕೊಟ್ಟ ಪ್ರಕೃತಿಯನ್ನು ಉಳಿಸುವ ನಿಟ್ಟಿಲ್ಲಿ ಈಗಿಂದಲೇ ಪ್ರಯತ್ನ ಆರಂಭಿಸೋಣ ಎಂದು ತಿಳಿಸಿದರು. ಜೇಸಿಐ ಅಧ್ಯಕ್ಷ ಹರ್ಷರಾಜ್ ಸಿ ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಬಿರದ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಪ್ರಖ್ಯಾತ ರಾಷ್ಟ್ರೀಯ ಜಲ ತಜ್ಞರಾz ಜೋಸೆಫ್ ಬಿ ಎಂ. ರೆಬೆಲ್ಲೋರವರ ಪರಿಚಯ ನೀಡಿದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಜಯರಾಜ್ ಎಸ್. ಬಂಗೇರ ರವರು ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಜೇಸಿಐ ಉಪಾಧ್ಯಕ್ಷ ಹಾಗೂ ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಯುವ ಜನ ಸೇವಾ ನಿರ್ದೇಶಕ ಷನ್ಫತ್ ಷರೀಫ್ ಉಪಸ್ಥಿತದ್ದರು.
ವೇಗವಾಗಿ ನಡೆಯುತ್ತಿರುವ ನಗರೀಕರಣದಿಂದಾಗಿ ಮನುಷ್ಯ ಇಂದು ಪ್ರಕೃತಿಯನ್ನು ನಾಶಗೊಳಿಸುತ್ತಿದ್ದಾನೆ. ಹಿಂದಿನ ಕಾಲದಲ್ಲಿ ಮಳೆ ನೀರನ್ನು ಭೂಮಿಯಲ್ಲಿ ಹಿಡಿದಿಡುತ್ತಿದ್ದ ಕೆರೆಗಳು, ತೋಡು ಕಟ್ಟೆಗಳು, ಬಾವಿಗಳು ಇಂದು ಮಾಯವಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದೊಂದು ದಿನ ಭೀಕರ ಬರಗಾಲ ಬರುವುದು ಖಚಿತ. ಈ ನಿಟ್ಟಿನಲ್ಲಿ ಯಾವ ರೀತಿ ಮಳೆ ನೀರು ಕೊಯ್ಲು ಮಾಡಿ, ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದು ಎಂಬುದರ ಬಗ್ಗೆ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿದ ಜೋಸೆಫ್ ಬಿ ಎಂ. ರೆಬೆಲ್ಲೋರವರು ಮಕ್ಕಳಿಗೆ ಮನದಟ್ಟವಾಗುವಂತೆ ವಿವರಿಸಿದರು.





