






ವಿಟ್ಲ: ಅಡ್ಯನಡ್ಕ ಜನತಾ ಪದವಿಪೂರ್ವ ಕಾಲೇಜಿನ ವನಸಿರಿ ಇಕೋ ಕ್ಲಬ್ ಹಾಗೂ ಜನತಾ ಪ್ರೌಢಶಾಲೆಯ ಶ್ಯಾಮಲಾ ಇಕೋ ಕ್ಲಬ್ ಸಂಯುಕ್ತಾಶ್ರಯದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಜನತಾ ವಿದ್ಯಾಸಂಸ್ಥೆಗಳ ಸಂಚಾಲಕಿ ಡಾ. ಅಶ್ವಿನಿ ಕೃಷ್ಣಮೂರ್ತಿ ಮಾತನಾಡಿ, ಪರಿಸರಕ್ಕೆ ವಿಶಾಲವಾದ ವ್ಯಾಪ್ತಿಯಿದೆ. ಮಾನವನ ಚಟುವಟಿಕೆಗಳು ಪರಿಸರಕ್ಕೆ ಪೂರಕವಾಗಿರಬೇಕು. ನೀರು, ಗಾಳಿ, ಭೂಮಿಯನ್ನು ಒಳಗೊಂಡ ಜೀವಗೋಳವನ್ನು ಜೊತೆಗೂಡಿ ಸಂರಕ್ಷಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಮುರಳಿ ಮಾಧವ ಪೆಲ್ತಾಜೆ ಅವರು ವನ್ಯಜೀವಿಗಳ ಸಂರಕ್ಷಣೆ ಹಾಗೂ ನಾನಾ ಬಗೆಯ ಹಾವು – ಸರೀಸೃಪಗಳ ಬಗ್ಗೆ ಮಾಹಿತಿ ನೀಡಿದರು.
ಜನತಾ ಪ.ಪೂ. ಕಾಲೇಜಿನ ಪ್ರಿನ್ಸಿಪಾಲ್ ಡಿ. ಶ್ರೀನಿವಾಸ್ ಹಾಗೂ ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಟಿ. ಆರ್. ನಾಯ್ಕ್ ಮಾತನಾಡಿದರು.
ಜೀವಶಾಸ್ತ್ರ ಉಪನ್ಯಾಸಕ ರವಿಕುಮಾರ್ ಎಸ್. ಪ್ರಸ್ತಾವಿಸಿದರು. ಗಣಿತ ಉಪನ್ಯಾಸಕ ಗಣೇಶ್ ಕೆ. ಆರ್. ಪರಿಚಯಿಸಿದರು. ವಿದ್ಯಾರ್ಥಿಗಳಿಂದ ಪರಿಸರ ಗೀತೆಗಳ ಗಾಯನ ಹಾಗೂ ಗೀತರೂಪಕ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ವಠಾರದಲ್ಲಿ ಸ್ವಚ್ಛತೆ ಮತ್ತು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇಕೋ ಕ್ಲಬ್ ಅಧ್ಯಕ್ಷೆ ಭಾಗ್ಯಶ್ರೀ ಸ್ವಾಗತಿಸಿದರು. ದೀಕ್ಷಾ ವಂದಿಸಿದರು. ಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.





