ಅಡ್ಯನಡ್ಕ : ಜನತಾ ಪ್ರೌಢಶಾಲೆಯಲ್ಲಿ ಶೈಕ್ಷಣಿಕ ವರ್ಷದ ನಾನಾ ಸಹಪಠ್ಯ ಸಂಘಗಳನ್ನು ಉದ್ಘಾಟಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ಶಿಕ್ಷಕ, ಸಂಪನ್ಮೂಲ ವ್ಯಕ್ತಿ ಎಂ. ನಾರಾಯಣ ಉಪಾಧ್ಯಾಯ ಅವರು ಸಾಹಿತ್ಯ ಸಂಘ, ಗ್ರಾಹಕ ಸಂಘ, ಕ್ರೀಡಾ ಸಂಘ, ಸಮಾಜ ವಿಜ್ಞಾನ ಸಂಘ, ವಿಜ್ಞಾನ ಮತ್ತು ಪರಿಸರ ಸಂಘವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಯಶಸ್ವಿಯಾಗಿ ಹೊರಹೊಮ್ಮಲು ಸಹಪಠ್ಯ ಚಟುವಟಿಕೆಗಳು ಪೂರಕವಾಗಿವೆ. ಕಲಿಕೆಯಲ್ಲಿ ಏಕತಾನತೆಯನ್ನು ನಿವಾರಿಸಿ ತನ್ಮಯತೆಯಿಂದ ತೊಡಗಿಕೊಳ್ಳಲು ಅವು ಪ್ರೇರಣೆ ನೀಡುತ್ತವೆ ಎಂದರು.
ಮುಖ್ಯ ಶಿಕ್ಷಕ ಟಿ. ಆರ್. ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕ ಶಿವಕುಮಾರ ಸಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಎಸ್. ರಾಜಗೋಪಾಲ ಜೋಶಿ, ನಾನಾ ಸಂಘಗಳ ಅಧ್ಯಕ್ಷರಾದ ಮಧುರಾ ಬಿ., ವಿಜೇತ ಎಂ, ಬಲ್ಕೀಸಾಬಾನು, ಸಹನಕುಮಾರಿ ಎ. ಹಾಗೂ ರಶ್ಮಿತಾ ಎನ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜ್ಞಾನ ಶಿಕ್ಷಕಿ ಕುಸುಮಾವತಿ ಮಾತನಾಡಿದರು. ವಿದ್ಯಾರ್ಥಿಗಳಿಂದ ಸಮೂಹಗಾನ ಮತ್ತು ಭಾಷಣ ಜರುಗಿತು. ಬಲ್ಕೀಸಾಬಾನು ಸ್ವಾಗತಿಸಿದರು. ತೃಪ್ತಿ ವಂದಿಸಿದರು. ಫಾತಿಮತ್ ಅಫೀಝ ಕಾರ್ಯಕ್ರಮ ನಿರೂಪಿಸಿದರು.