ವಿಟ್ಲ: ಸಮಾಜ ಸೇವೆಯ ಚಟುವಟಿಕೆಗಳಲ್ಲಿ ಯುವಕರು ಗುರುತಿಸಿಕೊಂಡರೆ ಅದು ಅವರಿಗೆ ಘನತೆ ತಂದುಕೊಡುತ್ತವೆ ಹಾಗೂ ನಾಡಿನಲ್ಲಿ ಉತ್ತಮ ಬಾಂಧವ್ಯಗಳನ್ನು ಬೆಸೆಯಲು ಕಾರಣವಾಗಲಿದೆ ಎಂದು ಬರಿಮಾರು ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಾಕೇಶ್ ಪ್ರಭು ಹೇಳಿದರು.
ಅವರು ಬದ್ರಿಯಾ ಫೌಂಡೇಶನ್ ಸೂರಿಕುಮೇರು ಯೇನಪೋಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದೊಂದಿಗೆ ಸೂರಿಕುಮೇರು ವಿಜಯಾ ಕಾಂಪ್ಲೆಕ್ಸ್ ವಠಾರದಲ್ಲಿ ನಡೆದ ಸಾರ್ವಜನಿಕ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು,
ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್ ಧರ್ಮಗುರು ಗ್ರೇಗರಿ ಪಿರೇರಾ ಮಾತನಾಡಿ ಎಲ್ಲಾ ಧರ್ಮದವರನ್ನು ಕರೆದು ಮಾಡುವ ಇಂತಹ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಸೌಹಾರ್ದತೆ ಮೂಡಿ ಪ್ರೀತಿ ವಿಶ್ವಾಸ ಹೆಚ್ಚಲಿದೆ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಮಾಅತ್ ಖತೀಬ್ ಡಿ.ಎಸ್ ಅಬ್ದುರ್ರಹ್ಮಾನ್ ಮದನಿ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮಡಿದ ವೀರ ಯೋಧರ ಮರಣಕ್ಕೆ ಸಂತಾಪ ಸೂಚಿಸಿ ಉಗ್ರರನ್ನು ಯಾವ ಧರ್ಮದೊಂದಿಗೆ ಗುರುತಿಸಬಾರದು ಉಗ್ರರಿಗೆ ಧರ್ಮವಿಲ್ಲ ಧರ್ಮವಿಲ್ಲದ ನೀಚರು ಉಗ್ರವಾದಿಗಳಾಗುತ್ತಾರೆ ಎಂದು ಹೇಳಿದರು.
ಅಬ್ದುರ್ರಶೀದ್ ನೀರಪಾದೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ವಿಜಯಾ ಕಾಂಪ್ಲೆಕ್ಸ್ ಮಾಲಕ ಉಲ್ಲಾಸ್ ರೈ ಸೂರಿಕುಮೇರು, ಉದ್ಯಮಿ ಸುಧೀರ್ ಶಂಭುಗ, ಮುಹಮ್ಮದ್ ಬರಿಮಾರ್, ಸಿದ್ದೀಕ್ ಜಿ.ಎಸ್ ಕಲ್ಲಡ್ಕ, ಹನೀಫ್ ಸಂಕ, ಫಾರೂಕ್ ಸತ್ತಿಕಲ್ಲು, ಹಸೈನ್ ಸಂಕ, ಯೂಸುಫ್ ಹಾಜಿ, ಸುಲೈಮಾನ್ ಸೂರಿಕುಮೇರು, ಮುಹಮ್ಮದ್ ಮುಸ್ಲಿಯಾರ್, ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಮೂಸ ಕರೀಂ ಮಾಣಿ, ಪತ್ರಕರ್ತ ಅಬ್ದುಲ್ ಲತೀಫ್ ನೇರಳಕಟ್ಟೆ ಮುಂತಾದ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಾಧನೆಗಾಗಿ ವಿದ್ಯಾರ್ಥಿ ನೌಶಾದ್ ಉಮರ್ ಸೂರಿಕುಮೇರು ಇವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಪುಲ್ವಾಮದಲ್ಲಿ ಮಡಿದ ಸೈನಿಕರಿಗಾಗಿ ಮೌನ ಪ್ರಾರ್ಥನೆ ನಡೆಸಲಾಯಿತು. ಮಹಿಳೆಯರ ಸಹಿತ ಎಪ್ಪತ್ತಾರು ಮಂದಿ ರಕ್ತದಾನ ಮಾಡಿದರು. ಅತಿಥಿಗಳಿಗೆ ಹಾಗೂ ವೈದ್ಯರ ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬದ್ರಿಯಾ ಫೌಂಡೇಶನ್ನ’ ಯಹ್ಯಾ ಬರಿಮಾರು ಸ್ವಾಗತಿಸಿದರು. ಅಬ್ದುಲ್ ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು, ಸಲೀಂ ಮಾಣಿ ವಂದಿಸಿದರು.