ಉಜಿರೆ: ಇಂದಿನ ಪರಿವರ್ತನಶೀಲ ಸಮಾಜದಲ್ಲಿ ಕಾಲಕಾಲಕ್ಕೆ ಮಹಾಪುರುಷರು ಜನ್ಮ ತಾಳುತ್ತಾರೆ. ಅಂತಹ ಪುಣ್ಯ ಪುರುಷರನ್ನು ನಾವೆಲ್ಲಾ ಗೌರವಿಸಬೇಕು ಎಂದು ಆಚಾರ್ಯ ವರ್ಧಮಾನ ಸಾಗರ್ಜೀ ಮಹಾರಾಜರು ಹೇಳಿದರು.
ಇಲ್ಲಿ ಶಾಶ್ವತ, ಅಶಾಶ್ವತ ಎಲ್ಲವೂ ಇದೆ. ಪ್ರತೀ ಸಲ ನಮ್ಮ ಹುಟ್ಟು ಹಬ್ಬವನ್ನು ನಾವು ಆಚರಿಸಿಕೊಳ್ಳುತ್ತೇವೆ. ಆಯಸ್ಸು ಮುಗಿಯುತ್ತಲೇ ಹೋಗುತ್ತದೆ. ನಾವೇನು ಮಾಡಿದ್ದೇವೆ ಎಂದು ಚಿಂತಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಆಚಾರ್ಯ ಕೀರ್ತಿ ಸಾಗರ ಮುನಿ ಮಹಾರಾಜರು ಆಶೀರ್ವಚನ ನೀಡಿದರು.
ತಮ್ಮ ಪ್ರವಚನದಲ್ಲಿ, ನಾವು ದೇವಿ ದೇವಸ್ಥಾನಗಳಿಗೆ ಹೋಗುತ್ತವೆ, ಪೂಜಿಸುತ್ತೇವೆ. ಆದರೆ ದೇವಸ್ಥಾನದಿಂದ ಹೊರಬಂದ ಮೇಲೆ ನಾವು ಹೆಣ್ಣನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ದೇವಸ್ಥಾನದಲ್ಲಿ ಉಪಯೋಗಿಸುವ ಆರತಿ, ಪೂಜಾ, ವಂದನೆ, ಸ್ತುತಿ ಇವೆಲ್ಲವೂ ಸ್ತ್ರೀ ವಾಚಕ ಪದಗಳೇ ಆಗಿವೆ. ಮನೆಯಲ್ಲಿ ಸುಖ,ಶಾಂತಿ, ನೆಮ್ಮದಿ ಬೇಕಾದರೆ ಹೆಣ್ಣು ಇರಲೇ ಬೇಕು. ಹೀಗಿದ್ದರು ಆಕೆಯನ್ನು ನಾವು ಕೀಳು ದೃಷ್ಟಿಯಿಂದ ನೋಡುತ್ತಿರುತ್ತವೆ. ಇದು ನಿಲ್ಲಬೇಕು ಎಂದರು.
ಮಕ್ಕಳಿಗೆ ಮೊಬೈಲು, ಟಿವಿ, ಅಂತರ್ಜಾಲ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆಯೇ ಹೊರತು ಸಂಸ್ಕಾರ ನೀಡಲು ತಂದೆ ತಾಯಂದಿರಿಗೆ ಪುರುಸೋತ್ತೇ ಇರುವುದಿಲ್ಲ. ಇಂದು ಹಲವಾರು ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಿದ್ದು ವೈದ್ಯರು, ಇಂಜಿನಿಯರು, ವಕೀಲರನ್ನು ತಯಾರು ಮಾಡುತ್ತವೆಯೇ ಹೊರತು ಆಚಾರ್ಯ ಕುಂದಕುಂದರಂಥಹ ಮಹಾನ್ ವಿಭೂತಿ ಪುರುಷರನ್ನುಸೃಷ್ಟಿಸುವುದಿಲ್ಲ ಎಂದು ವಿಷಾದಿಸಿದ ಅವರು ಮುನಿಗಳು ಮಾಡುವ ಉಪದೇಶಗಳನ್ನು ಹೃದಯದಲ್ಲಿಟ್ಟುಕೊಳ್ಳಬೇಕೇ ಹೊರತು ಬರೀ ಕೇಳಲಿಕ್ಕೆ ಮಾತ್ರ ಅಲ್ಲ ಎಂದು ಸ್ಪಷ್ಟಪಡಿಸಿದರು.
ಆಚಾರ್ಯಕುಮುದನಂದಿ ಮಹಾರಾಜರು ತಮ್ಮ ಮಂಗ ಪ್ರವಚನದಲ್ಲಿ ತಪಸ್ಸು ಮಾಡದಿದ್ದರೆ ಮೋಕ್ಷಸಿಗಲಾರದು.ಕಲ್ಲಿನ ದೇವರ ಮೂರ್ತಿಯನ್ನು ನಾವು ನೋಡುತ್ತೇವೆ, ಪ್ರಾರ್ಥಿಸುತ್ತೇವೆ, ಪೂಜೆ ಸಲ್ಲಿಸುತ್ತೇವೆ ಆದರೆ ನಾವು ಪರಮಾತ್ಮ ಯಾಕೆ ಆಗಬಾರದು ಎಂದು ಯೋಚನೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ಮುನಿಸಂಘದವರು, ಆರ್ಯಿಕೆಯವರು ಉಪಸ್ಥಿತರಿದ್ದರು.