ಉಜಿರೆ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಬಾಹುಬಲಿಯಚತುರ್ಥ ಮಹಾಮಸ್ತಕಾಭಿಷೇಕದ ಅಂಗವಾಗಿ ಸೋಮವಾರ ಪಂಚಮಹಾವೈಭವ ಮಂಟಪದಲ್ಲಿ ಮೊದಲ ತೀರ್ಥಂಕರ ವೃಷಭನಾಥರ ಆಡಳಿತದಲ್ಲಿ ನವಯುಗಾರಂಭದ ಘಟನೆಗಳನ್ನು ರೂಪಕದ ಮೂಲಕ ಸಾದರ ಪಡಿಸಲಾಯಿತು.
ಕಥಾನಕ: ಅಯೋಧ್ಯೆಯಲ್ಲಿ ವೃಷಭನಾಥನ ಆಸ್ಥಾನದಲ್ಲಿ ವೀಣಾವಾದನ ನಡೆಯುತ್ತಿರುತ್ತದೆ. ಪ್ರಜೆಗಳು ಭಯ-ಆತಂಕದಿಂದ ಬಂದು ತಮ್ಮ ಸಮಸ್ಯೆಗಳನ್ನು ರಾಜನಲ್ಲಿ ತಿಳಿಸಿ ಪರಿಹಾರ ಕೋರುತ್ತಾರೆ. ಪ್ರಕೃತಿ ವಿಕೃತಿಯಾಗಿದೆ. ಆಹಾರದ ಕೊರತೆ ಇದೆ. ಕ್ರೂರ ಪ್ರಾಣಿಗಳ ಉಪಟಳ. ಬದುಕುವ ದಾರಿಕಾಣದೆ ಕಂಗಾಲಾಗಿದ್ದೇವೆ. ಮಾರ್ಗದರ್ಶನ ನೀಡಿ, ಸಮಸ್ಯೆ ಪರಿಹರಿಸಿ ಎಂದು ಪ್ರಜೆಗಳು ರಾಜನಲ್ಲಿ ಬೇಡಿಕೊಳ್ಳುತ್ತಾರೆ.
ವೃಷಭನಾಥ ಅಭಯ ನೀಡಿ ನವಯುಗ ಪರಿವರ್ತನೆಗೆ ನಾಂದಿ ಹಾಡುತ್ತಾನೆ. ಸಕಾಲಿಕ ಮಾರ್ಗದರ್ಶನ ನೀಡಿ ಸಮಸ್ಯೆಗಳನ್ನು ಸುಲಲಿತವಾಗಿ ಪರಿಹರಿಸುತ್ತಾನೆ.
ತನ್ನ ಪ್ರಜೆಗಳಿಗೆ ಅಸಿ(ಖಡ್ಗದ ಬಳಕೆ) ಮಸಿ (ಬರವಣಿಗೆ) ಕೃಷಿ, ವಾಣಿಜ್ಯ, ವಿದ್ಯೆ ಮತ್ತು ಕಲೆಯನ್ನು ಬೋಧಿಸುತ್ತಾನೆ. ಎಲ್ಲವನ್ನೂ ನ್ಯಾಯಯುತವಾಗಿ, ಸಮರ್ಪಕವಾಗಿ ಬಳಸಬೇಕು. ಬದುಕು, ಬದುಕಲು ಬಿಡು ಎಂಬ ಅಹಿಂಸಾ ತತ್ವನ್ನು ಪಾಲಿಸಬೇಕು ಎಂದು ಮಾರ್ಗದರ್ಶನ ನೀಡುತ್ತಾನೆ.
ವೃಷಭನಾಥನ ಆದೇಶದಂತೆ ಎಲ್ಲರೂ ಅವರ ಕಾಯಕದಲ್ಲಿ ತಲ್ಲೀನರಾಗುತ್ತಾರೆ. ಎಲ್ಲೆಲ್ಲೂ ಸುಖ-ಸಂತೋಷ, ಶಾಂತಿ ನೆಮ್ಮದಿಯೊಂದಿಗೆ ಸಮೃದ್ಧಿ ನೆಲೆಸುತ್ತದೆ. ಸಂತೆಯ ದೃಶ್ಯ, ಸುಗ್ಗಿ ಕುಣಿತ, ಪ್ರಜೆಗಳ ಸುಖ-ಸಮೃದ್ಧಿ ಕಂಡು ಪ್ರೇಕ್ಷಕರು ಆಶ್ಚರ್ಯಚಕಿತರಾದರು.
ವೃಷಭನಾಥರ ಪತ್ನಿಯರಾದ ಸುನಂದೆ ಮತ್ತು ಯಶಸ್ವತಿರಾಜನ ಆಸ್ಥಾನಕ್ಕೆ ಬಂದು ಬೆಳಗ್ಗಿನ ಜಾವತಾವುಕಂಡ ಶೋಢಶ (ಹದಿನಾರು) ಸ್ವಪ್ನಗಳನ್ನು ವಿವರಿಸುತ್ತಾರೆ.
ಯಶಸ್ವತಿಯ ಮಗ ಮುಂದೆ ಪರಾಕ್ರಮ ಶಾಲಿಯಾಗಿ ಚಕ್ರವರ್ತಿಯಾಗುತ್ತಾನೆ (ಭರತ) ಹಾಗೂ ಸುನಂದೆಯ ಮಗ (ಬಾಹುಬಲಿ) ಸಕಲ ಸುಖ-ಭೋಗಗಳನ್ನು ತ್ಯಜಿಸಿ ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುತ್ತಾನೆ. ತ್ಯಾಗ ಮೂರ್ತಿಯಾಗಿ ಲೋಕ ಪೂಜ್ಯನಾಗುತ್ತಾನೆ ಎಂದು ವೃಷಭನಾಥನಿಗೆ ತಿಳಿಯುತ್ತದೆ.
ಆಚಾರ್ಯ ಶ್ರೀ 108 ವರ್ಧಮಾನ ಸಾಗರ್ಜಿ ಮುನಿಮಹಾರಾಜರು, ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ್ಜಿ ಮುನಿಮಹಾರಾಜರು, ಮುನಿಸಂಘದವರು, ಕ್ಷುಲ್ಲಕರು ಹಾಗೂ ಮಾತಾಜಿಯವರು ನವಯುಗಾರಂಭದ ದೃಶ್ಯಗಳನ್ನು ನೋಡಿ ತಾವು ಇಂತಹ ರೂಪಕ ಈ ವರೆಗೆ ನೋಡಿಲ್ಲ. ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ ಮೂಡಿ ಬಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಆಶೀರ್ವದಿಸಿದರು.
ಜ್ಞಾನ, ವಿಜ್ಞಾನವು ಸುಜ್ಞಾನಕ್ಕೆ ಪ್ರೇರಕವಾಗಬೇಕು: ಡಿ. ವೀರೇಂದ್ರ ಹೆಗ್ಗಡೆಯವರು.
ಆಜ್ ಕೀ ಆನಂದ್ ಕೀ ಜೈ ಎಂಬ ಉದ್ಘಾರದೊಂದಿಗೆರೂಪಕ ಪ್ರದರ್ಶನದ ಬಗ್ಯೆ ಸಂತೋಷ ವ್ಯಕ್ತ ಪಡಿಸಿ, ಜ್ಞಾನ, ವಿಜ್ಞಾನವು ಸುಜ್ಞಾನಕ್ಕೆ ಪ್ರೇರಕವಾಗಬೇಕು. ವಿಜ್ಞಾನದ ಕೊಡುಗೆಗಳನ್ನು ಹಿತ-ಮಿತವಾಗಿ, ಇತಿ-ಮಿತಿಯೊಳಗೆ ಬಳಸಬೇಕು. ಲೋಕ ಕಲ್ಯಾಣಕ್ಕಾಗಿ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ನಾವು ವಿಜ್ಞಾನದ ಹಾಗೂ ಸುಖ-ಭೋಗಗಳ ದಾಸರಾಗಬಾರದು. ಒಡೆಯರಾಗಬೇಕು. ಪ್ರಗತಿಗಾಗಿ ಹಾಗೂ ಲೋಕಕಲ್ಯಾಣಕ್ಕಾಗಿ ವಿಜ್ಞಾನವನ್ನು ಬಳಸಬೇಕು ಎಂದು ಹೆಗ್ಗಡೆಯವರು ಹೇಳಿದರು.
ಹೇಮಾವತಿ ಹೆಗ್ಗಡೆಯವರು, ಅನಿತಾ ಸುರೇಂದ್ರಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಹಾಗೂ ಶ್ರದ್ಧಾ ಅಮಿತ್ರವರ ಮಾರ್ಗದರ್ಶನದಲ್ಲಿ ಇನ್ನೂರ ಐವತ್ತು ಕಲಾವಿದರು ಭಾಗವಹಿಸಿ ಅತ್ಯುತ್ತಮ ರೂಪಕ ಪ್ರದರ್ಶನ ನೀಡಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು.
ರೂಪಕದ ದಾಖಲೀಕರಣ (ರೆಕಾರ್ಡಿಂಗ್) ಮಾಡಿರುವುದರಿಂದ ಇನ್ನು ನೂರು ವರ್ಷಗಳವರೆಗೂ ದೃಶ್ಯಾವಳಿ ನೋಡಿ ಅದರ ಸೊಗಡನ್ನು ಸವಿಯಬಹುದು ಎಂದು ಹೆಗ್ಗಡೆಯವರು ತಿಳಿಸಿ ಎಲ್ಲಾಕಲಾವಿದರನ್ನು ಅಭಿನಂದಿಸಿದರು.