ಉಜಿರೆ: ಧರ್ಮಸ್ಥಳದಲ್ಲಿ ಸೋಮವಾರ ಸಂಜೆ ಪಂಚಮಹಾ ವೈಭವ ಮಂಟಪದಲ್ಲಿ ನಾಮಕರಣ, ಬಾಲಲೀಲೋತ್ಸವ ಸಂಭ್ರಮ, ಸಡಗರ. ನೃತ್ಯದೊಂದಿಗೆರಾಜ-ರಾಣಿಯರ ಪ್ರವೇಶ (ವೃಷಭದೇವ ಹಾಗೂ ಪತ್ನಿಯರಾದ ಸುನಂದೆ ಮತ್ತು ಯಸ್ವತಿಯೊಂದಿಗೆ). ಎಲ್ಲೆಲ್ಲೂ ನಾಮಕರಣದ ಸಂಭ್ರಮ. ಎಲ್ಲರೂ ಉತ್ಸಾಹದಿಂದ ವೇದಿಕೆಯಲ್ಲಿ ಓಡಾಡುತ್ತಿದ್ದರು. ಬಂದವರನ್ನು ಆದರದಿಂದ ಸತ್ಕರಿಸಿದರು.
ಮಕ್ಕಳಿಗೆ ಭರತ, ಬಾಹುಬಲಿ, ಬ್ರಾಹ್ಮಿ, ಸುಂದರಿ ಮೊದಲಾಗಿ ನಾಮಕರಣ ಮಾಡಿಎಲ್ಲರಿಗೂ ಸಿಹಿ ತಿಂಡಿ ಹಂಚಲಾಯಿತು. ಅರಮನೆಗೆ ಜ್ಯೋತಿಷಿಗಳನ್ನು ಕರೆಸಿ ಮಕ್ಕಳ ಜಾತಕ ಪರಿಶೀಲನೆ ನಡೆಸಲಾಯಿತು. ಜಾತಕಗಳನ್ನು ಪರಿಶೀಲಿಸಿದ ಜ್ಯೋತಿಷಿಗಳು ಭರತ ಮಹಾಪರಾಕ್ರಮಿಯಾಗಿ ಚಕ್ರವರ್ತಿಯಾಗಿ ಮೆರೆಯುತ್ತಾನೆ ಎಂದು ಹೇಳಿದರು.
ಬಾಹುಬಲಿ ರತ್ನತ್ರಯಧರ್ಮ ಪಾಲನೆಯೊಂದಿಗೆ ಅನೇಕಾಂತವಾದ ದೃಷ್ಟಿಯಿಂದ ಸಕಲ ಸುಖ-ಭೋಗತೆರೆದು ಮೋಕ್ಷ ಪ್ರಾಪ್ತಿ ಮಾಡಿಕೊಳ್ಳುತ್ತಾನೆ ಎಂದು ಭವಿಷ್ಯ ನುಡಿದರು.
ಮುಂದೆ ಎಲ್ಲಾ ಮಕ್ಕಳಿಗೂ ಉತ್ತಮ ಆಟ-ಪಾಠ ಹಾಗೂ ಧಾರ್ಮಿಕ ಶಿಕ್ಷಣ ನೀಡಲಾಗುತ್ತದೆ. ರತ್ನತ್ರಯ ಧರ್ಮ (ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ) ಪಾಲನೆ, ಅಹಿಂಸೆ, ಸತ್ಯ, ತ್ಯಾಗ, ಸೇವೆ ಹಾಗೂ ಆತ್ಮಕಲ್ಯಾಣದ ಮಹತ್ವವನ್ನು ತಿಳಿಸಲಾಗುತ್ತದೆ. ಉತ್ತಮ ಗುಣಮಟ್ಟದ ಆಟ-ಪಾಠಗಳೊಂದಿಗೆ ಮಕ್ಕಳನ್ನು ಸಭ್ಯ, ಸುಸಂಸ್ಕತ ನಾಗರಿಕರನ್ನಾಗಿ ರೂಪಿಸಲಾಗುತ್ತದೆ.
ಪ್ರೌಢಅಭಿನಯ, ಸುಶ್ರಾವ್ಯ ಹಿನ್ನೆಲೆಗಾಯನ ಸಮರ್ಪಕಧ್ವನಿ ಮತ್ತು ಬೆಳಕಿನ ಸಂಯೋಜನೆಯೊಂದಿಗೆ ರೂಪಕ ಪ್ರದರ್ಶನ ಪ್ರೇಕ್ಷಕರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಆಯ್ಯಯ್ಯಾ ಎಂಚ ಪೊರ್ಲಾಂಡ್ ಎಂದು ಪ್ರೇಕ್ಷಕರೆಲ್ಲ ಅಚ್ಚರಿ ವ್ಯಕ್ತಪಡಿಸಿದರು.