Sunday, October 22, 2023

‘ಕಾರ್ಮಿಕರ ಸಮಸ್ಯೆ ನಿವಾರಣೆಗೆ ಅಡಕೆ ಕೌಶಲ್ಯ ಪಡೆ ತರಬೇತಿ ಪೂರಕ’-ಸತೀಶ್ಚಂದ್ರ

Must read

ವಿಟ್ಲ: ಅಡಕೆ ಮರ ಏರುವ ಕಾಯಕದಲ್ಲಿ ತೊಡಗಲು ಅಪೇಕ್ಷೆ ಪಟ್ಟು 30 ಮಹಿಳೆಯರು ಅಪೇಕ್ಷೆ ಪಟ್ಟರೆ ಅವರಿಗಾಗಿಯೇ ಪ್ರತ್ಯೇಕ ಅಡಕೆ ಕೌಶಲ್ಯ ಪಡೆ ತರಬೇತಿಯನ್ನು ಆಯೋಜಿಸಲು ಕ್ಯಾಂಪ್ಕೋ ಸಂಸ್ಥೆ ಸಿದ್ದವಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದ್ದಾರೆ.
ಅವರು ಕ್ಯಾಂಪ್ಕೋ, ಐಸಿಎಆರ್ – ಸಿಪಿಸಿಆರ್ಐ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ, ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ, ಅಡಕೆ ಪತ್ರಿಕೆ, ಅಡಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಆಶ್ರಯದಲ್ಲಿ ವಿಟ್ಲದ ಸಿಪಿಸಿಆರ್ ಐ ಆವರಣದಲ್ಲಿ ಶುಕ್ರವಾರ ಸಮಾಪನಗೊಂಡ ಅಡಕೆ ಕೌಶಲ್ಯ ಪಡೆ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಡಕೆ ಕೌಶಲ್ಯ ಪಡೆ ತರಬೇತಿಯ ಮೂಲಕ   ಕಾರ್ಮಿಕರ ಕೊರತೆ ಎಂಬ ಸಾಮಾಜಿಕ ಸಮಸ್ಯೆಗೆ ಸ್ಪಂದಿಸಿದ ತೃಪ್ತಿ ಕ್ಯಾಂಪ್ಕೋಗೆ ಇದೆ ಎಂದ ಅವರು, ಈ ತರಬೇತಿಯಲ್ಲಿ ಕೌಶಲ್ಯ ಅಭಿವೃದ್ಧಿಯ ಜೊತೆಗೆ ನೈತಿಕ ಮೌಲ್ಯವನ್ನು ಎತ್ತಿಹಿಡಿಯುವ ಕೆಲಸವೂ ನಡೆದಿದೆ. ಕಳೆದ ಬಾರಿ ತರಬೇತಿ ನೀಡಿದ 30 ಮಂದಿಯಲ್ಲಿ ಈಗಾಗಲೇ 23 ಮಂದಿ ಅಡಿಕೆ ಕೊಯಿಲು ಮಾಡುತ್ತಿರುವುದೇ ಶಿಬಿರದ ಯಶಸ್ಸಿಗೆ ಸಾಕ್ಷಿಯಾಗಿದೆ. 5 ದಿನದ ತರಬೇತಿಯ ಅವಧಿಯಲ್ಲಿ ಶಿಬಿರಾರ್ಥಿ ಪಡೆದ ಅನುಭವ ಇಡೀ ಕೃಷಿ ವಲಯಕ್ಕೆ ದೊಡ್ಡ ಕೊಡುಗೆಯಾಗಿದ್ದು ಕೃಷಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಶಿಬಿರಾರ್ಥಿಗಳಿಗೆ ಗುರುತಿನ ಚೀಟಿ ವಿತರಣೆ ಮಾಡಿದ ಸಿಪಿಸಿಆರ್ಐ ಹಂಗಾಮಿ ನಿರ್ದೇಶಕಿ ಡಾ.ಅನಿತಾ ಕರುಣ್, ಸಿಪಿಸಿಆರ್ಐ ಅಡಿಕೆ ಬೆಳೆಯ ಬಗ್ಗೆ ಅಧ್ಯಯನ ಮಾಡಿದರೆ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆ ಬಗ್ಗೆ ಹಾಗೂ ಕೃಷಿಕರ ಸಮಗ್ರ ಅಭಿವೃಧ್ಧಿಯ ಬಗ್ಗೆ ಚಿಂತನೆ ಮಾಡುತ್ತಿದೆ. ಕ್ಯಾಂಪ್ಕೋ ಜೊತೆಗೆ ಸದಾ ಸಹಕಾರಕ್ಕೆ ಸಿದ್ಧ ಎಂದರು.
ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿದ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಗ್ರಾಮೀಣ ಭಾಗದಲ್ಲೂ ಸಹಕಾರಿ ಸಂಘಗಳ ಸಹಕಾರದೊಂದಿಗೆ ಇಂತಹ ಶಿಬಿರಗಳು ನಡೆಯಬೇಕು ಎಂದರು. ಕಾಸರಗೋಡು ಪೆರಡಾಲ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಜಯದೇವ ಖಂಡಿಗೆ ಜೀವವಿಮೆ ಪತ್ರ ವಿತರಿಸಿದರು. ಪೆರ್ಲ ಸಿ.ಎ.ಬ್ಯಾಂಕ್ ಅಧ್ಯಕ್ಷ ವೆಂಕಟರಮಣ ಭಟ್, ಪ್ರಗತಿಪರ ಕೃಷಿಕ ಬದನಾಜೆ ಶಂಕರ ಭಟ್, ಮಂಚಿ ಶ್ರಿನಿವಾಸ್ ಆಚಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಯಾಂಪ್ಕೋ ಉಪಾಧ್ಯಕ್ಷ, ಶಿಬಿರ ನಿಶಕ ಶಂಕರನಾರಾಯಣ ಭಟ್ ಖಂಡಿಗ ಶಿಬಿರಾವಲೋಕನ ನಡೆಸಿದರು.  ಶಿಬಿರಾರ್ಥಿಗಳಾದ ನವೀನ್ಪ್ರಕಾಶ್ ಉಜಿರೆ , ಶಿವಪ್ರಸಾದ್ ಆಲೆಟ್ಟಿ, ಸಂದೀಪ್ , ಸಚಿನ್ ಸಿ , ಗೋವಿಂದರಾಜ್ ಅನಿಸಿಕೆ ವ್ಯಕ್ತಪಡಿಸಿದರು.
ಅಡಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಎ.ಆರ್.ಡಿ.ಎಫ್ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೇಶವ ಭಟ್ ವಂದಿಸಿದರು. ಕ್ಯಾಂಪ್ಕೊ ಸಂಸ್ಥೆಯ ಉದ್ಯೋಗಿ ಕಿಶನ್ ಪಳ್ಳತ್ತಡ್ಕ ನಿರೂಪಣೆ ಮಾಡಿದರು.

 

More articles

Latest article