ಗೌತಮನಲ್ಲಿ ಅದೆಷ್ಟು ಭುಗಿಲೆದ್ದ ತಳಮಳ ಪಾಪ ಯುವರಾಜ ಬುದ್ದನಾಗಿ ಬಿಟ್ಟ/
ಭೀಮರಾವನಲ್ಲಿ ಎಂತಹ ಗಾಢ ಅಸಹನೆ ಪಾಪ ಅಂಬೇಡ್ಕರ್ ಬೌದ್ಧನಾಗಿ ಬಿಟ್ಟ//
ಒಕ್ಕಲೆದ್ದೂ ಹರಾಜಾಗಿದ್ದು ಧರ್ಮವೋ ದೇಶವೋ ಜನರೋ ನಿಗೂಢ ಗೊಂದಲ/
ಆಳದಲ್ಲಿ ಅಸಹಿಷ್ಣುತೆ ಮೇಲೆ ಸವರುವ ತುಪ್ಪ ಸಿದ್ದಾಂತಕ್ಕೊಬ್ಬ ಬದ್ದನಾಗಿ ಬಿಟ್ಟ//
ಬಯಸುವ ಕೇಡು ಅಧಿಕಾರದ ಮದ ದುಡ್ಡಿನ ದರ್ಪಗಳಿಗೆ ದೊಡ್ಡತನದ ರುಚಿ/
ಅರಮನೆಯಲ್ಲಿ ಕಾಣದ ಒಳ ಭೇಗುದಿ ನೆಮ್ಮದಿ ಪಡೆದು ಪರಕೀಯನಾಗಿ ಬಿಟ್ಟ//
ಆತನಿಗೆ ಅಂದು ಗೊತ್ತಿತ್ತು ಇಲ್ಲಿನ ಜನರ ಬುದ್ಧಿ ನಡವಳಿಕೆಯ ಪರಮಾವಧಿ/
ಚೀನಾ ಜಪಾನ್ ಶ್ರೀಲಂಕಾ ಆಕ್ರಮಿಸಿ ದ್ವಂದ್ವ ಭಾರತ ರಂಗಸ್ಥಳವನ್ನಾಗಿ ಬಿಟ್ಟ//
ಕೋಟಿ ದೇವರುಗಳ ಲೆಕ್ಕ ಸಿಕ್ಕಿದ ದಿನವು ಸಿಗದ ಡಂಭಾಚಾರ ಜಾತಿಗಳ ಮೊತ್ತ/
ಸೊಕ್ಕು ಅಡಗಿಸುವ ವಿಫಲ ಯತ್ನ ಮಾನವೀಯತೆಯ ಗೋಜಲಾಗಿ ಬಿಟ್ಟ//
ಜ್ಞಾನ ಉಪದೇಶಗಳಿಗೆ ಬೇರೆಯದೇ ಅರ್ಥ ಕಲ್ಪಿಸಿ ಕಳೆಯುವ ಮೂಲಾರ್ಥ/
ತಣ್ಣನೆ ಕ್ರೌರ್ಯ ಸ್ವಾರ್ಥ ತಲ್ಲಿನ ಕ್ರಾಂತಿಯ ಶಿಶು ಆಗಿರದೆ ಶಾಂತಿದೂತನಾಗಿ ಬಿಟ್ಟ//
ಬಸವರಾಜ ಕಾಸೆ