ಯಾರೇ ಬಂದು ಹೋದರು
ಏನೇ ಅಂದರು
ಏನೇ ಆದರು
ನಾನು ಸಾಯ್ಲಿಲ್ಲ.
ಹಿಂಸೆ ಮಹಾ ಪಾಪ
ಆಸೆಯೇ ದುಃಖಕ್ಕೆ ಮೂಲ
ಎಂದು ಬುದ್ದ ಅಂದರು
ನಾನು ಹೌದೌದು ಅಂದಿದ್ದೆ
ಆದರೂ ನಾನು ಸಾಯಲ್ಲಿಲ್ಲ…!?
ಎಲ್ಲ ಬಿಟ್ಟು ದಿಗಂಬರನಾಗಿ ನಿಂತ
ಬಾಹುಬಲಿ ಯನ್ನು ನಾ ಕಂಡಿದ್ದೇನೆ
ಅವೆನೆತ್ತರವ ಅಳೆದಿದ್ದೇನೆ
ಅವನ ಕಥೆ ಓದಿದ್ದೇನೆ.
ಆದರೂ ನಾನು ಸಾಯಲಿಲ್ಲ..!?
ಅಲೆಗ್ಸಾಂಡರ್ ಪರಾಕ್ರಮ
ಜಗ ಗೆಲ್ಲುವ ಬಯಕೆ
ಕೊನೆಗೆ ಬರಿಗೈಯ್ಯಲ್ಲಿ
ಇಹಲೋಕ ಯಾತ್ರೆ ಮಾಡಿದ್ದು
ಎಲ್ಲಾ ಗೊತ್ತಿದೆ
ಆದರೂ ನಾನು ಸಾಯಲಿಲ್ಲ..!?
ಕೋಟೆ ಕಟ್ಟಿ ಮೆರೆದವರೆಲ್ಲ
ಮಣ್ಣಾದರು
ಎನ್ನುವ ಹಾಡ ಮತ್ತೆ ಮತ್ತೆ ಕೇಳಿಸಿಕೊಂಡಿದ್ದೇನೆ
ಆದರೂ ನಾನು ಸಾಯಲಿಲ್ಲ…!?
ಹೌದು ನಾನು ಸಾಯಲಿಲ್ಲ
ನನ್ನೊಳಗಿರುವ ನಾನು ಸಾಯಲಿಲ್ಲ
ನನ್ನದು ನನ್ನದು ಅನ್ನುವುದ ಬಿಡಲಿಲ್ಲ..
ನಾನು ಸಾಯಲಿಲ್ಲ
ಸಾಯುವುದೂ ಇಲ್ಲ…!
✍ಯತೀಶ್ ಕಾಮಾಜೆ